ಬೆಂಗಳೂರು: ಸಡಗರ ಸಂಭ್ರಮದೊಂದಿಗೆ ನಗರದಲ್ಲಿ ಮಧ್ಯರಾತ್ರಿ ನೂತನ ವರ್ಷಕ್ಕೆ ಸ್ವಾಗತ ದೊರೆತಿದ್ದರೂ, ರಜಾದಿನಗಳಿಂದಾಗಿ ಬೆಳಗ್ಗೆಯ ಹೊತ್ತಿಗೆ ಸಂಭ್ರಮ ಕಡಿಮೆಯಾಗಿತ್ತು.
ಮಧ್ಯರಾತ್ರಿಯಿಂದಲೇ ಆರಂಭವಾದ ಹೊಸ ವರ್ಷಾಚರಣೆ ವರ್ಷದ ಮೊದಲ ದಿನದಂದೂ ಸಪ್ಪೆಯಾಗಿತ್ತು. ಸಂಘ-ಸಂಸ್ಥೆಗಳು, ಹೋಟೆಲ್ ರೆಸ್ಟೋರೆಂಟ್, ಮಾಲ್, ಮಳಿಗೆಗಳಲ್ಲಿ ಸಾರ್ವಜನಿಕರು ಹೊಸ ವರ್ಷಾಚರಣೆ ಮಾಡುವುದರೊಂದಿಗೆ ಇಡೀ ದಿನ ಮೋಜಿನಲ್ಲಿ ಕಳೆದರು.
ಹೆಚ್ಚಿನ ಖಾಸಗಿ ಕಂಪನಿಗಳಿಗೆ ರಜಾದಿನವಾಗಿದ್ದರಿಂದ ಕ್ಲಬ್, ರೆಸ್ಟೋರೆಂಟ್ಗಳಿಗೆ ಅತಿ ಹೆಚ್ಚಿನ ಮಾರಾಟದ ದಿನವೂ ಆಗಿತ್ತು. ವಿಶೇಷ ಉಡುಗೊರೆ ಹಾಗೂ ರಿಯಾಯಿತಿ ದರದ ಆಕರ್ಷಕ ಕೊಡುಗೆಗಳನ್ನು ನೀಡಿದ್ದರಿಂದ ಮಾಲ್, ಮಳಿಗೆಗಳಲ್ಲಿ ಜನಸಂದಣಿ ಕಂಡುಬಂತು. ಆದರೆ, ನಗರದ ಪ್ರಮುಖ ಬೀದಿಗಳಲ್ಲಿ ಮಾತ್ರ ಜನಸಂದಣಿ ಕಂಡುಬಂದರೆ ಹೆಚ್ಚಿನ ಕಡೆ ಜನರಿಲ್ಲದ ರಸ್ತೆ, ಮಳಿಗೆಗಳು ಬಿಕೋ ಎನ್ನುತ್ತಿದ್ದವು. ಮುಂಜಾನೆ ಆರಂಭವಾದ ತುಂತುರು ಮಳೆ ಅದಕ್ಕೆ ಪೂರಕವಾಗಿತ್ತು.
ಮಲ್ಲೇಶ್ವರ ಮಂತ್ರಿ ಮಾಲ್, ಗರುಡಾ ಮಾಲ್, ಓರಾಯನ್ ಮಾಲ್, ಕೋರಮಂಗಲದ ಪೋರಂ ಸೇರಿದಂತೆ ಪ್ರಮುಖ ಮಾಲ್ಗಳಲ್ಲಿ ಮಾರಾಟ ಭರ್ಜರಿಯಾಗಿ ನಡೆಯಿತು. ರಾತ್ರಿ ಜನರ ಹರ್ಷೋದ್ಗಾರದಿಂದ ತುಂಬಿದ್ದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಾಂಬ್ ಸ್ಫೋಟದ ಆತಂಕದ ನಡುವೆ ಹಗಲಿನಲ್ಲಿಯೂ ಸಂಭ್ರಮ ಮುಂದುವರಿದಿತ್ತು.
ಬ್ಯಾಂಕ್ ವೃತ್ತ, ಜೆ.ಸಿ.ರಸ್ತೆ, ಕಾರ್ಪೋರೇಷನ್, ಕೆ.ಆರ್.ರಸ್ತೆ, ಶೇಷಾದ್ರಿಪುರ ಸೇರಿದಂತೆ ಸದಾ ವಾಹನ ದಟ್ಟಣೆಯಿಂದ ಗಿಜಿಗುಡುವ ರಸ್ತೆಗಳಲ್ಲಿ ಜನಸಂದಣಿ ಕಡಿಮೆ ಕಂಡುಬಂತು.
ಶಿಕ್ಷಣ ಸಂಸ್ಥೆಗಳಿಗ ರಜೆ
ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ಹೊಸ ವರ್ಷದ ಸಂಭ್ರಮ ನಡೆಯುತ್ತದೆ. ಆದರೆ, ಪದವಿ ಕಾಲೇಜುಗಳಲ್ಲಿ ಇತ್ತೀಚೆಗೆ ಪರೀಕ್ಷೆಗಳು ಮುಗಿಬಿದ್ದು, ಸಂಭ್ರಮಾಚರಣೆಗೆ ತೆರೆ ಬಿದ್ದಿತ್ತು. ಪಿಯುಸಿ ಕಾಲೇಜುಗಳು ತೆರೆದಿದ್ದು, ವಿದ್ಯಾರ್ಥಿಗಳು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು. ವೈಕುಂಠ ಏಕಾದಶಿಯ ಪ್ರಭಾವವೂ ಹೊಸ ವರ್ಷಕ್ಕೆ ತಟ್ಟಿದಂತಿತ್ತು. ಮಧ್ಯರಾತ್ರಿ ವರ್ಷ ವರ್ಷಕ್ಕೆ ಸ್ವಾಗತ ಕೋರಿದ ಕುಟುಂಬಗಳು ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಮಗ್ನರಾಗಿದ್ದರು.
Advertisement