ಶ್ರೀನಗರ: ಶುಕ್ರವಾರ ರಾತ್ರಿ ಸತತ ಗುಂಡಿನ ಮಳೆಗರೆಯುತ್ತಿದ್ದ ಇಬ್ಬರು ಪಾಕಿಸ್ತಾನಿ ರೇಂಜರ್ಸ್ಗಳನ್ನು ಭಾರತೀಯ ಸೇನೆಯ ಯೋಧರು ಹೊಡೆದುರುಳಿಸಿದ್ದಾರೆ.
ನೂತನ ವರ್ಷಾರಂಭಲ್ಲಿಯೂ 'ಪಾಪಿಸ್ತಾನ' ಮತ್ತೆ ತನ್ನ ದುಷ್ಟಬುದ್ಧಿ ಮುಂದುವರೆಸಿದ್ದು, ಭಾರತೀಯ ಗಡಿಗಳತ್ತ ಮತ್ತೆ ಗುಂಡಿನ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಕತುವಾ ಮತ್ತು ಸಾಂಬಾ ಸೆಕ್ಟರ್ಗಳಲ್ಲಿ ಪಹರೆ ನಡೆಸುತ್ತಿದ್ದ ಬಿಎಸ್ಎಫ್ ಯೋಧರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿರುವ ಭಾರತೀಯ ಯೋಧರು, ಗುಂಡಿನ ದಾಳಿಯಲ್ಲಿ ತೊಡಗಿದ್ದ ಪಾಕಿಸ್ತಾನದ ಇಬ್ಬರು ರೇಂಜರ್ಸ್ಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಎಸ್ಎಫ್ ಮೂಲಗಳ ಪ್ರಕಾರ ಗುರುವಾರದಿಂದ ಇಲ್ಲಿಯವರೆಗೂ ಒಟ್ಟು ಐವರು ಪಾಕಿಸ್ತಾನಿ ರೇಂಜರ್ಸ್ಗಳನ್ನು ಹೊಡೆದುರುಳಿಸಲಾಗಿದೆ. ಗುರುವಾರ ರಾತ್ರಿ 9.30ರ ಸಮಯದಲ್ಲಿ ಆರಂಭಗೊಂಡ ಗುಂಡಿನ ಚಕಮಕಿ ಇಂದೂ ಕೂಡ ಮುಂದುವರೆದಿದ್ದು, ಕಳೆದ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪಾಕಿಸ್ತಾನಿ ರೇಂಜರ್ಸ್ಗಳು ಸಾವನ್ನಪ್ಪಿದ್ದಾರೆ. ಇನ್ನು ಅದೃಷ್ಟವಶಾತ್ ಭಾರತೀಯ ಪೋಸ್ಟ್ಗಳಲ್ಲಿ ಯಾವುದೇ ಸೈನಿಕರು ಸಾವನ್ನಪ್ಪಿಲ್ಲವಾದರೂ, ಕೆಲ ಯೋಧರು ಹೋರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಡಿಯಲ್ಲಿನ ಪರಿಸ್ಥಿತಿ ಕುರಿತಂತೆ ಬಿಎಸ್ಎಫ್ ನಿರ್ದೇಶಕ ಡಿಕೆ ಪಾಠಕ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಪಾಕಿಸ್ತಾನ ಪಡೆಗೆ ಅವರದೇ ಹಾದಿಯಲ್ಲಿ ದಿಟ್ಟ ಉತ್ತರ ನೀಡುವಂತೆ ರಾಜನಾಥ್ಸಿಂಗ್ ಅವರು ಸೂಚಿಸಿದ್ದು, ಇಂಡೋ-ಪಾಕ್ ಗಡಿಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಅವರು ಹೇಳಿದ್ದಾರೆ. ಇದೀಗ ಗಡಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿಯಲ್ಲಿ ಸೇನೆಯ ಸಂಖ್ಯಾ ಬಲವನ್ನು ಹೆಚ್ಚಿಸುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement