ನವದೆಹಲಿ: ತನ್ನನ್ನು ಅತ್ಯಾಚಾರ ಮಾಡಿದ್ದು ಇವನೇ ಎಂದು ಉಬರ್ ಕ್ಯಾಬ್ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಯುವತಿ ಹೇಳಿದ್ದಾಳೆ.
ಚಾರ್ಚ್ ಶೀಟ್ ಹಾಕುವುದಕ್ಕೂ ಮೊದಲು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಲುವಾಗಿ ಡಿ.8 ರಂದು ಯುವತಿಯನ್ನು ತೀಸ್ ಹಜಾರಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಕ್ಯಾಬ್ ಚಾಲಕನನ್ನು ಕಂಡ ಯುವತಿ ಆತನನ್ನು ಗುರ್ತಿಸಿ, 'ನನ್ನನ್ನು ಅತ್ಯಾಚಾರ ಮಾಡಿದ ಭೂತ ಇವನೇ' ಎಂದು ಕೆಂಡಮಂಡಲವಾಗಿ ನ್ಯಾಯಾಲಯದ ಹೊರಾಂಗಣದಲ್ಲಿ ಕೂಗಾಡಿದಳು.
ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಶಿವಕುಮಾರ್ ಯಾದವ್ ನನಗೆ ಉಸಿರುಗಟ್ಟಿದ್ದಂತೆ ಆಗುತ್ತಿದ್ದು, ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ತನಿಖೆಗೆ ಸಹಕರಿಸಲಿಲ್ಲ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಗುರ್ಗಾಂವ್ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ (27) ಕೆಲಸ ಮುಗಿಸಿ ರಾತ್ರಿ ನವದೆಹಲಿಯ ಇಂದರ್ಲೋಕ ಪ್ರದೇಶದಲ್ಲಿರುವ ಮನೆಗೆ ಉಬರ್ ಟ್ಯಾಕ್ಸಿ ಯ ಮೂಲಕ ಹೋಗುತ್ತಿದ್ದಳು. ಕಾರಿನ ಹಿಂದಿನ ಸೀಟಿನಲ್ಲಿದ್ದ ಆಕೆ ನಿದ್ರೆ ಹೋಗಿದ್ದನ್ನು ಕಂಡ ಟ್ಯಾಕ್ಸಿ ಚಾಲಕ ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯುವತಿಗೆ ಥಳಿಸಿ ಅತ್ಯಾಚಾರ ಎಸಗಿ ನಂತರ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಡಿ.7ರಂದು ಅತ್ಯಾಚಾರ ಎಸಗಿದ್ದ ಉಬರ್ ಕ್ಯಾಬ್ ಚಾಲಕ ಶಿವಕುಮಾರ್ (32) ಎಂಬಾತನನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ 100 ಪುಟಗಳ ಚಾರ್ಚ್ಶೀಟ್ ದಾಖಲಿಸಲಾಗಿದ್ದು, 44 ಪ್ರಮುಖ ದಾಖಲೆಗಳನ್ನು ದೆಹಲಿ ಪೊಲೀಸರು ಸಂಗ್ರಹಿಸಿದ್ದಾರೆ. ಆರೋಪಿ ಶಿವಕುಮಾರ್ ಯಾದವ್ ವಿರುದ್ಧ ಸೆಕ್ಷನ್ 376 (ಅತ್ಯಾಚಾರ), 366 (ಅಪಹರಣ), 506 ( ಪ್ರಾಣ ಬೆದರಿಕೆ), 323 (ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement