ಗಾಂಧಿನಗರ: ಆರ್ಥಿಕ ಸುಧಾರಣೆ, ಅಭಿವೃದ್ಧಿಯ ಕನಸು ಕಾಣುತ್ತಿರುವ ನಮ್ಮ ಸರ್ಕಾರ ಮುಂದಿನ ವರ್ಷ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ), ಹೊಸ ಭೂಸ್ವಾಧೀನ ನೀತಿ, ಕಲ್ಲಿದ್ದಲು ಗಣಿಗಳ ಪಾರದರ್ಶಕತೆಯತ್ತ ಗಮನ ಹರಿಸಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸೋಮವಾರ ಶಕ್ತಿಶಾಲಿ ಗುಜರಾತ್ ಶೃಂಗದಲ್ಲಿ ಮಾತನಾಡಿದ ಅವರು, ಈ ಶೃಂಗವನ್ನು ದೇಶದ ಅತಿದೊಡ್ಡ ಹಾಗೂ ಮುಂಜೂಣಿಯ ಆರ್ಥಿಕ ಸಮಾವೇಶ ಎಂದು ಬಣ್ಣಿಸಿದ್ದಾರೆ. ಹಿಂದಿನ ವರ್ಷ ಯುಪಿಎ ಸರ್ಕಾರ ಹೂಡಿಕೆಗಳು ಹಾಗೂ ಯೋಜನೆಗಳಿಗೆ ಅಡ್ಡಿಪಡಿಸುತ್ತಿತ್ತು ಎಂಬ ಆರೋಪವನ್ನೂ ಜೇಟ್ಲಿ ಮಾಡಿದರು.
ಯುಪಿಎ ಸರ್ಕಾರದ ಪ್ರತಿಕೂಲ ತೆರಿಗೆ ನೀತಿ ಹೂಡಿಕೆದಾರರಲ್ಲಿ ಭಯ ಹುಟ್ಟಿಸಿತ್ತು. ತೆರಿಗೆ ಇಲಾಖೆ ವೊಡಾಫೋನ್ ಗ್ರೂಪ್, ಶೆಲ್ ಮತ್ತಿತರ ಕಂಪನಿಗಳ ವಿರುದ್ಧ ಹೋದಾಗ ಜಾಗತಿಕ ಹೂಡಿಕೆದಾರರು ಆಂತಕಪಟ್ಟಿದ್ದರು. ಆ ಸರ್ಕಾರ ಪರಿಚಯಿಸಿದ ಹೊಸ ಕಂಪನಿ ಕಾನೂನು ಸದ್ಯದ ಉದ್ದಿನೆ ಅಗತ್ಯಗಳಿಗೆ ಸಂಪೂರ್ಣ ವಿರುದ್ಧವಾಗಿತ್ತು. ಆದರೆ ನಮ್ಮ ಸರ್ಕಾರ ಕಾಪೋರೇಟ್ ಕಾನೂನುಗಳನ್ನು ಮತ್ತು ತೆರಿಗೆ ನೀತಿಗಳನ್ನು ಪೂರ್ಣವಾಗಿ ಬದಲಾಯಿಸಲಿದೆ. ನಾವು ಕೈಗೊಂಡ ಎಲ್ಲ ಕ್ರಮಗಳೂ ಪ್ರಗತಿಪರವಾದಂಥದ್ದು. ಭೂ ಸ್ವಾಧೀನ ಕಾನೂನಿಗೆ ತಂದಿರುವ ತಿದ್ದುಪಡಿ ಅಭಿವೃದ್ಧಿಗೆ ಮಾತ್ರವಲ್ಲ. ರೈತರಿಗೂ ಅನುಕೂಲ ಕಲ್ಪಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
Advertisement