ನವದೆಹಲಿ: ಹೆಣ್ಣು ಮಕ್ಕಳ ಜೀವವನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಿ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯಾಗಿ ನಾನು ನಿಮ್ಮ ಮುಂದೆ ಭಿಕ್ಷೆ ಬೇಡುತ್ತಿದ್ದೇನೆ.
ಇದು ಹರ್ಯಾಣ ದ ಪಾಣಿಪತ್ನಲ್ಲಿ `ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಿದ ಮಾತು.
ಹೆಣ್ಣು ಭ್ರೂಣ ಹತ್ಯೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು.
ನಾವೀಗ 21ನೇ ಶತಮಾನದಲ್ಲಿದ್ದೇವೆ ಎಂದು ಹೇಳಲೇ ನಾಚಿಕೆಯಾಗುತ್ತದೆ. ಹೆಣ್ಣು ಶಿಶುವನ್ನು ಭ್ರೂಣದಲ್ಲೇ ಕೊಲ್ಲುವ ಮೂಲಕ 18ನೇ ಶತಮಾನದಲ್ಲಿರುವಂತೆ
ಕಾಣುತ್ತಿದ್ದೇವೆ. ನೆನಪಿರಲಿ ಹೆಣ್ಣು ಮಕ್ಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಪ್ರತಿಭಾನ್ವಿತರು. ನಿಮಗೆ ಸಾಕ್ಷಿ ಬೇಕಿದ್ದರೆ, ಅವರ ಪರೀಕ್ಷೆಯ ಫಲಿತಾಂಶವನ್ನೇ ಗಮನಿಸಿ.
ಜನ ತಮ್ಮ ಸೊಸೆ ಹೆಚ್ಚು ಓದಿರಬೇಕು ಎಂದು ಬಯಸುತ್ತಾರೆ. ಆದರೆ, ತಮ್ಮ ಮಗಳನ್ನೇಕೆ ಓದಿಸುವುದಿಲ್ಲ ಎಂದೂ ಪ್ರಶ್ನಿಸಿದರು.
ಹರಿಯಾಣದ ಸಮೀಪದಲ್ಲಿ ಕೊಳವೆ ಬಾವಿಗೆ ಪ್ರಿನ್ಸ್ ಎಂಬ ಬಾಲಕ ಬಿದ್ದಾಗ ಟಿವಿ ಮುಂದೆ ಕುಳಿತು ಕೋಟ್ಯಂತರ ಮಂದಿ ಪ್ರಾರ್ಥನೆ ಮಾಡುತ್ತೀರಿ. ಆದರೆ, ಪ್ರತಿದಿನ
ಸಾವಿರಾರು ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಈ ಬಗ್ಗೆ ಯಾರಾದರೂ ಯೋಚಿಸಿದ್ದೀರಾ ಎಂದು ಕೇಳಿದರು.
ಹೆಣ್ಣುಮಕ್ಕಳಿಗೆ `ಸುಕನ್ಯಾ ಸಮೃದ್ಧಿ '
ಆಂದೋಲನದ ಉತ್ತೇಜನಕ್ಕಾಗಿ ಪ್ರಧಾನಿ ಮೋದಿ ಅವರು ಸಣ್ಣ ಹೂಡಿಕೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಶೇ. 9.1 ಬಡ್ಡಿ ನೀಡುವುದರ ಜತೆಗೆ ತೆರಿಗೆ ವಿನಾಯಿತಿಯನ್ನು ಪಡೆಯುವ ಸೌಲಭ್ಯ ನೀಡಲಾಗಿದೆ. ಇದಕ್ಕೆ `ಸುಕನ್ಯಾ ಸಮೃದ್ಧಿ ಖಾತೆ' ಎಂದು ಹೆಸರಿಡಲಾಗಿದೆ. ಹೆಣ್ಣು ಮಗು ಹುಟ್ಟಿದಾಗಿನಿಂದ 10 ವರ್ಷವಾಗುವುದರೊಳಗೆ ಯಾವಾಗ ಬೇಕಾದರೂ ಹಣವನ್ನೂ ಠೇವಣಿ ಇಡಬಹುದಾಗಿದೆ. ರು. 1000-ರು. 1.5 ಲಕ್ಷ ವರೆಗೆ ಠೇವಣಿ ಇಡಬಹುದು.
Advertisement