ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ವಿಧಿವಶ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವಿಧಿ ವಶರಾಗಿದ್ದಾರೆ.
ಆರ್.ಕೆ ಲಕ್ಷ್ಮಣ್
ಆರ್.ಕೆ ಲಕ್ಷ್ಮಣ್

ಪುಣೆ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವಿಧಿವಶರಾಗಿದ್ದಾರೆ.

ಕರ್ನಾಟಕದ ಮೈಸೂರು ಮೂಲದವರಾದ 94 ವರ್ಷದ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಯ್ಯರ್  ಅವರು ಪುಣೆಯ ದೀನನಾಥ್ ಮಂಗೇಷ್ಕರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಸಂಜೆ ಬಹು ಅಂಗಾಂಗಳ ವೈಫಲ್ಯದಿಂದ ಅವರು ಇಹಲೋಕ ತ್ಯಜಿಸಿದ್ದಾರೆ.

2005ರಲ್ಲಿ ಕೇಂದ್ರ ಸರ್ಕಾರ ಆರ್.ಕೆ ಲಕ್ಷ್ಮಣ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಆರ್.ಕೆ.ಲಕ್ಷ್ಮಣ್
ಮೈಸೂರಿನಲ್ಲಿ 1921ರ ಅಕ್ಟೋಬರ್ 24ರಂದು ಜನಿಸಿದ್ದ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ಲಕ್ಷ್ಮಣ್ ಅವರು ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ ಸಹೋದರ.

7 ದಶಕಗಳ ಹಿಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಾಮನ್ ಮ್ಯಾನ್ ಕಾರ್ಟೂನುಗಳನ್ನ ಚಿತ್ರಿಸುತ್ತಿದ್ದುದು ಇದೇ ಆರ್.ಕೆ.ಲಕ್ಷ್ಮಣ್ ಅವರು. ಟೈಮ್ ಆಫ್ ಇಂಡಿಯಾಗೂ ಮೊದಲು ಇವರು ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಹಾಸ್ಯ ಪತ್ರಿಕೆ ಕೊರವಂಜಿಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದರು.

ಸಹೋದರ ಆರ್.ಕೆ.ನಾರಾಯಣ್ ಬರೆಯುತ್ತಿದ್ದ ಕಥೆಗಳಿಗೆ ಲಕ್ಷ್ಮಣ್ ಅವರೇ ಕಾರ್ಟೂನ್ ಮಾಡಿಕೊಡುತ್ತಿದ್ದರು. ಆದರೆ, ಟೈಮ್ಸ್ ಆಫ್ ಇಂಡಿಯಾದಲ್ಲಿ ಇವರು ಬರೆಯುತ್ತಿದ್ದ ಜನಸಾಮಾನ್ಯ ವ್ಯಂಗ್ಯ ಚಿತ್ರಗಳು ಇವರ ಖ್ಯಾತಿಯನ್ನು ವಿಶ್ವಕ್ಕೇ ಹರಡುವಂತೆ ಮಾಡಿದವು. ಭಾರತೀಯ ಕಾರ್ಟೂನುಗಳಿಗೆ ಒಂದು ಹೊಸ ಆಯಾಮವನ್ನೇ ಕೊಟ್ಟ ಶ್ರೇಯಸ್ಸು ಇವರಿಗೆ ಸಿಗುತ್ತದೆ.


ಆರ್.ಕೆ ಲಕ್ಷ್ಮಣ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಜನಪ್ರಿಯ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಆರ್.ಕೆ ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳು ಜನರ ಮೊಗದಲ್ಲಿ ನಗು ತರಿಸುತ್ತಿದ್ದು, ಅವರ ನೆನಪು ಅಜರಾಮರ. ಆರ್.ಕೆ ಲಕ್ಷ್ಮಣ್‌ರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಆರ್.ಕೆ ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರ ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com