ಬೆಂಗಳೂರು: ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಅಗತ್ಯ ಬೇಡಿಕೆಗಳನ್ನು ಪೂರೈಸಲು ವಿಶೇಷ ಉದ್ದೇಶದ ಘಟಕ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಬೇಕು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಸಲಹೆ ನೀಡಿದರು.
ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಾಲ್ಕು ನೂತನ ರೈಲು ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವುದು ಸವಾಲಿನ ಕೆಲಸ. ಬಜೆಟ್ನಲ್ಲಿ ಹೊಸ ಯೋಜನೆ ಘೋಷಿಸುವಾಗ ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳು ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಘಟಕ ಸ್ಥಾಪಿಸುವ ಮೂಲಕ ಯೋಜನೆಗಳನ್ನು ಜಾರಿ ಮಾಡಬೇಕು.ಕೇಂದ್ರವೂ ಇದಕ್ಕೆ ಅಗತ್ಯ ಅನುದಾನ ನೀಡುತ್ತದೆ. ಬಜೆಟ್ನಲ್ಲಿ ಕೆಲವು ರಾಜ್ಯಗಳಿಗೆ ಮಾತ್ರ ಕೊಡುಗೆ ನೀಡಲಾಗುತ್ತಿದೆ ಎಂಬ ಅಪವಾದವೂ ತಪ್ಪುತ್ತದೆ ಎಂದರು.
ಮಹಾನಗರಗಳಲ್ಲಿ ಉಪನಗರ ರೈಲು ಸೇವೆ ಆರಂಭಿಸುವುದು ಮುಖ್ಯವಾದ ಪ್ರಸ್ತಾವನೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿಲ್ಲ. ರಾಜ್ಯ ಸರ್ಕಾರ `ಸಮಗ್ರ ಸಾರಿಗೆ ನಿರ್ವಹಣೆ ಪ್ರಾ„ಕಾರ' ಸ್ಥಾಪಿಸಿ, ಎಲ್ಲ ಸಾರಿಗೆ ಸೇವೆಗಳ ಹೊಂದಾಣಿಕೆಯೊಂದಿಗೆ ಉಪನಗರ ರೈಲು ಸೇವೆ ಆರಂಭಿಸಬೇಕು. ಮುಂಬೈ ಹಾಗೂ ಇತರ ಮಹಾನಗರಗಳಲ್ಲಿ ಇದೇ ಮಾದರಿಯ ಪ್ರಾಧಿಕಾರವಿದ್ದು, ಕೇಂದ್ರ ಸರ್ಕಾರಕ್ಕೆ ಹೊರೆಯಾಗದಂತೆ ಯೋಜನೆ ಜಾರಿಯಾಗುತ್ತಿದೆ. ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್ ರೈಲು ಪ್ರಸ್ತಾವನೆ ಕೇಂದ್ರದಲ್ಲಿದ್ದು, ಚರ್ಚೆ ಹಂತದಲ್ಲಿದೆ ಎಂದರು.
ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಮೂಲಸೌಕರ್ಯಾಭಿವೃದ್ಧಿ ಮಾಡಬೇಕು. ಎಲ್ಲ ನಿಲ್ದಾಣಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವುದಾದರೆ, ಕಾಮಗಾರಿ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎಂದರು.
ಮೂಲಸೌಕರ್ಯಾಭಿವೃದ್ಧಿಗೆ ಸಂಸದರ ನಿಧಿಯಿಂದ ರು1 ಕೋಟಿ ನೀಡುವುದಾಗಿ ಸಂಸದ ಪಿ.ಸಿ.ಮೋಹನ್ ಪ್ರಕಟಿಸಿದರು. ರೈಲ್ವೆ ನಿಲ್ದಾಣದಲ್ಲಿ ರು3.31 ಕೋಟಿ ವೆಚ್ಚದ, 135 ಮೀ. ಉದ್ದ- 5ಮೀ. ಅಗಲದ ಪಾದಚಾರಿ ಮಾರ್ಗ, ಮೇಲ್ಸೇತುವೆ ಕಾಮ ಗಾರಿಗೆ ಚಾಲನೆ ನೀಡಲಾಯಿತು. ಆ.30 ರಂದು ಕಾಮಗಾರಿ ಪೂರ್ಣವಾಗಲಿದೆ. ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಎಫ್ ಕೆಸಿಸಿಐ ಅಧ್ಯಕ್ಷ ಸಂಪತ್ರಾಮನ್
ಹಾಜರಿದ್ದರು.
ಯಶವಂತಪುರ- ಕಟ್ರಾ
ಶನಿವಾರ ಬೆ.11.30ಕ್ಕೆ ಯಶವಂತಪುರ, ಸೋಮವಾರ ಸಂ.7.45ಕ್ಕೆ ಕಟ್ರಾ, ಮಂಗಳವಾರ ಬೆ.6.30ಕ್ಕೆ ಕಟ್ರಾ, ಗುರುವಾರ ಮ.3ಕ್ಕೆ ಯಶವಂತಪುರ. ಬಳ್ಳಾರಿ, ಸಿಕಂದರಾಬಾದ್, ನಾಗಪುರ,ಝಾನ್ಸಿ, ನವದೆಹಲಿ ಮೂಲಕ 56 ಗಂಟೆ ಪ್ರಯಾಣ. 3,241 ಕಿ.ಮೀ. ದೂರ.
ಪಟನಾ- ಬೆಂಗಳೂರು
ಗುರುವಾರ ರಾ.11.30ಕ್ಕೆ ಪಟನಾ, ಶನಿವಾರ ಸಂ.6.55ಕ್ಕೆ ಬೆಂಗಳೂರು ಕಂಟೋನ್ಮೆಂಟ್. ಭಾನುವಾರ ಮ.3.30ಕ್ಕೆ ಕಂಟೋನ್ಮೆಂಟ್, ಮಂಗಳವಾರ ಬೆ.9.45ಕ್ಕೆ ಪಟನಾ. ಚೆನ್ನೈ, ವಿಜಯವಾಡ, ನಾಗಪುರ, ಜಬಲ್ಪುರ, ಛಿವಕೀ ಮೂಲಕ 42 ಗಂಟೆ ಪ್ರಯಾಣ. 2,727 ಕಿ.ಮೀ ದೂರ.
ಕಾಮಾಖ್ಯ-ಬೆಂಗಳೂರು
ಮಂಗಳವಾರ ರಾ.8.30ಕ್ಕೆ ಕಾಮಾಖ್ಯ, ಗುರುವಾರ ರಾ.9.15ಕ್ಕೆ ಕಂಟೋನ್ಮೆಂಟ್. ಶುಕ್ರವಾರ ಬೆ.10.15ಕ್ಕೆ ಕಂಟೋನ್ಮೆಂಟ್, ಭಾನುವಾರ ಬೆ.11.25ಕ್ಕೆ ಕಾಮಾಖ್ಯ. ನ್ಯೂ ಜಲ್ಪಾಯ್ ಗುರಿ, ಹೌರಾ, ಭುವನೇಶ್ವರ್, ವಿಜಯವಾಡ, ಚೆನ್ನೈ ಮೂಲಕ 49 ಗಂಟೆ ಪ್ರಯಾಣ. 3022 ಕಿ.ಮೀ. ದೂರ.
ಟಾಟಾ ನಗರ- ಯಶವಂತಪುರ
ಗುರುವಾರ ಸಂ.6.35ಕ್ಕೆ ಟಾಟಾ ನಗರ, ಶನಿವಾರ ಸಂ.6.30ಕ್ಕೆ ಯಶವಂತಪುರ. ಭಾನುವಾರ ಬೆ.10ಕ್ಕೆ ಯಶವಂತಪುರ, ಮಂಗಳವಾರ ಮ.12.35ಕ್ಕೆ ಟಾಟಾ ನಗರ. ಚಕ್ರಧರಪುರ, ರಾಯಗಡ, ವಿಶಾಖಪಟ್ಟಣ, ಸಿಕಂದರಾಬಾದ್, ಬಳ್ಳಾರಿ, ಅರಸೀಕೆರೆ ಮಾರ್ಗವಾಗಿ 48 ಗಂಟೆ ಪ್ರಯಾಣ. 2,461 ಕಿ.ಮೀ. ದೂರ.
ನೂತನ ರೈಲುಗಳು
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ ಕೈ ಬಿಟ್ಟಿಲ್ಲ. ವೆಚ್ಚ ಹೆಚ್ಚಾದರೂ ನಿಧಾನವಾಗಿ ಅನುಷ್ಠಾನವಾಗಲಿದೆ. ಬೆಂಗಳೂರು- ಮಂಗಳೂರು ಪ್ರತಿದಿನದ ರೈಲು ಸೇವೆ ನೀಡುವ ಯೋಜನೆ, ಕೊಡಗಿನ ಕುಶಾಲನಗರದವರೆಗೆ ರೈಲು ಮಾರ್ಗ ಕಾಮಗಾರಿ ಶೀಘ್ರವಾಗಿ ಆರಂಭವಾಗಬೇಕು.
ಡಿ.ವಿ.ಸದಾನಂದಗೌಡ, ಕೇಂದ್ರ ಕಾನೂನು ಸಚಿವ
Advertisement