ನವದೆಹಲಿ: ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಕುಮಾರ್ ವಿಶ್ವಾಸ್ ತನ್ನ ವಿರುದ್ಧ ಅಶ್ಲೀಲ ಟೀಕೆಯನ್ನು ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿ ಬಿಜೆಪಿ
ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಕುಮಾರ್ ವಿಶ್ವಾಸ್ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲೇ ತನ್ನ ವಿರುದ್ಧ ಅವಮಾನಕರ ಟೀಕೆ ಮಾಡಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿ ಕೂಡ ಕುಮಾರ್ ವಿಶ್ವಾಸ್ ವಿರುದ್ಧ ಇದೇ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ತನಿಖೆ ಹಾಗೂ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ನಾನು ಅಶ್ಲೀಲ ಕಾಮೆಂಟ್ ಮಾಡಿಲ್ಲ ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್ ತಾನು ಯಾವುದೇ ರೀತಿಯ ಕಾಮ ಪ್ರಚೋದಕ ಟೀಕೆಗಳನ್ನು ಮಾಡಿಲ್ಲ. ಒಂದೊಮ್ಮೆ ಅಂಥದ್ದನ್ನು ಕಿರಣ್ ಬೇಡಿ ಸಾಬೀತು ಪಡಿಸಿದರೆ ತಾನು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.
ಕಿರಣ್ ಬೇಡಿ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಅವರನ್ನು ದೀದಿ ಎಂದೇ ಕರೆಯುತ್ತಿದ್ದೆ. ಈಗಿರುವಾಗ ನಾನು ಅವರ ಬಗ್ಗೆ ಕೀಳಾಗಿ ಕಾಮ ಪ್ರಚೋದಕ ಟೀಕೆ ಮಾಡಲು ಹೇಗೆ ಸಾಧ್ಯ ಎಂದು ವಿಶ್ವಾಸ್ ಪ್ರಶ್ನಿಸಿದ್ದಾರೆ.
Advertisement