ನವದೆಹಲಿ: ಕಳೆದ ವರ್ಷ ಐಎನ್ಎಸ್ ಸಿಂಧುರತ್ನದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣ ಸಂಬಂಧ ಸಮರನೌಕೆಯ ಕಮಾಂಡಿಂಗ್ ಆಫೀಸರ್ ವಿರುದ್ಧ ಕೋರ್ಟ್ ಮಾರ್ಷಲ್ (ಸೇನಾ ವಿಚಾರಣೆ)ಗೆ ಅನುಮತಿ ನೀಡಲಾಗಿದೆ.
ಜತೆಗೆ ಇತರೆ 6 ಅಧಿಕಾರಿಗಳಿಗೆ `ಗಂಭೀರ ಅತೃಪ್ತಿ' ಪತ್ರವನ್ನು ರವಾನಿಸಲಾಗಿದೆ. ನೌಕಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಶಿಫಾರಸಿಗೆ ನೌಕಾ ಪ್ರಧಾನ ಕಚೇರಿ ಒಪ್ಪಿಗೆ ನೀಡಿದೆ. ಹೀಗಾಗಿ ಸದ್ಯದಲ್ಲೇ ಸಿಂಧುರತ್ನ ಸಮರನೌಕೆಯ ಕಮಾಂಡಿಂಗ್ ಅಧಿಕಾರಿ ಸಂದೀಪ್ ಸಿನ್ಹಾ ವಿರುದ್ಧ ಸೇನಾ ವಿಚಾರಣೆ ಆರಂಭವಾಗಲಿದೆ.
ಇದೇ ವೇಳೆ, `ಗಂಭೀರ ಅತೃಪ್ತಿ' ಪತ್ರ ಜಾರಿಯಾಗಿರುವ ಅಧಿಕಾರಿಗಳು ಮುಂದಿನ 2 ವರ್ಷಗಳ ಕಾಲ ಯಾವುದೇ ಬಡ್ತಿ, ಅಧ್ಯಯನ ಅಥವಾ ವಿದೇಶದಲ್ಲಿ ನಿಯೋಜನೆಗೆ ಅನರ್ಹರಾಗುತ್ತಾರೆ ಎಂದು ನೌಕಾ ಮೂಲಗಳು ತಿಳಿಸಿವೆ. ಕಳೆದ ಫೆ.26ರಂದು ಮುಂಬೈ ಕರಾವಳಿಯಾಚೆ ಸಿಂಧುರತ್ನದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಈ ಘಟನೆಯ ನೈತಿಕ ಹೊಣೆಹೊತ್ತು ಅದೇ ದಿನ ನೌಕಾಪಡೆ ಮುಖ್ಯಸ್ಥ ಜೋಷಿ ಅವರು ರಾಜಿನಾಮೆ ನೀಡಿದ್ದರು.
Advertisement