ನವದೆಹಲಿ: ತನ್ನ ಮಾಜಿ ಸಹಚರ ಹಾಗೂ ಈಗಿನ ಶತ್ರು ಛೋಟಾ ರಾಜನ್ ನನ್ನು ಕೊಲ್ಲಲು ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತೊಮ್ಮೆ ಯೋಜನೆ ರೂಪಿಸಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ದಾವೂದ್ ಇಬ್ರಾಹಿಂ ತನ್ನ ಸಹಚರ ಛೋಟಾ ಶಕೀಲ್ ನನ್ನು ಏಪ್ರಿಲ್ ನಲ್ಲಿ ಆಸ್ಟ್ರೇಲಿಯಾಕ್ಕೆ ಕಳಿಸಿ ಛೋಟಾ ರಾಜನ್ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಛೋಟಾ ರಾಜನ್ ವಾಸ್ತವ್ಯ ಹೂಡಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲು ಅವನ ಸಹಾಯಕನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಛೋಟಾ ಶಕೀಲ್ ಪ್ರಯತ್ನ ನಡೆಸಿದ್ದ. ಅದಕ್ಕಾಗಿ ಕರೆ ಮಾಡಿದ್ದ ಎಂಬುದು ತಿಳಿದು ಬಂದಿದೆ.
ಈ ಕರೆಯನ್ನು ಭಾರತೀಯ ಜಾಗೃತ ಸಂಸ್ಥೆ ತಡೆಹಿಡಿದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
1993ರಲ್ಲಿ ಮುಂಬೈಯ ಸರಣಿ ಸ್ಪೋಟದ ನಂತರ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಬೇರೆ ಬೇರೆಯಾದರು. ಆ ನಂತರ ಛೋಟಾ ರಾಜನ್ ಕೂಡ ಭೂಗತ ಡಾನ್ ಆಗಿ ಗುರುತಿಸಿಕೊಂಡ.
2000ದಲ್ಲಿ ಸಹ ದಾವೂದ್ ರಾಜನ್ ನನ್ನು ಬ್ಯಾಂಕಾಂಕ್ ನಲ್ಲಿ ಮುಗಿಸಲು ಸಂಚು ನಡೆಸಿದ್ದ. ಛೋಟಾ ಶಕೀಲ್ ಮತ್ತು ಅವನ ಸಹಚರರು ಪಿಜ್ಜಾ ಮಾರುವವರ ವೇಷದಲ್ಲಿ ಬಂದಿದ್ದರು, ಆದರೆ ರಾಜನ್ ಗೆ ಸಂಶಯ ಬಂದು ಹೊಟೇಲ್ ಮಹಡಿಯಿಂದ ತಪ್ಪಿಸಿಕೊಂಡು ಹೋಗಿದ್ದ.ಇವರಿಬ್ಬರ ಶತ್ರುತ್ವ ಇಂದಿನವರೆಗೆ ಮುಂದುವರಿದುಕೊಂಡು ಬಂದಿದೆ.
ಬಾಲಿವುಡ್ ನಲ್ಲಿ ಸಹ ದಾವೂದ್-ರಾಜನ್ ಕುರಿತು ಸಿನೆಮಾ ಮಾಡಲಾಗಿದೆ. 2002ರಲ್ಲಿ ಇವರಿಬ್ಬರ ಕುರಿತ ಕಂಪೆನಿ ಎಂಬ ಚಿತ್ರ ತೆರೆಕಂಡಿತ್ತು.
Advertisement