
ನವದೆಹಲಿ: ಮಲಹೊರುವ ಮತ್ತು ಬರಿಗೈಯಲ್ಲಿ ಚರಂಡಿ ಶುಚಿ ಮಾಡುವ ಪದ್ಧತಿ ಈಗ ಕಡಿಮೆಯಾಗಿದೆದು ನೀವು ಅಂದುಕೊಂಡಿದ್ದರೆ ಅದು ಸುಳ್ಳು. ಈ ಅಮಾನವೀಯ ಕೆಲಸ ದೇಶದ ಅನೇಕ ರಾಜ್ಯಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಶುಕ್ರವಾರವಷ್ಟೇ ಬಿಡುಗಡೆಯಾದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ, 2011ರ ವರದಿಯು ಈ ಆಘಾತಕಾರಿ ಅಂಶವನ್ನು
ಬಹಿರಂಗಪಡಿಸಿದೆ.
ಕರ್ನಾಟಕಕ್ಕೆ 4ನೇ ಸ್ಥಾನ: ಮಲಹೊರುವ ಪದ್ಧತಿ ವ್ಯಾಪಕವಾಗಿರುವ ದೇಶದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿರುವುದು ವಿಶೇಷ. ಮಲಹೊರುವ ಕೆಲಸಕ್ಕೆ ನೇಮಿಸುವುದು ಅಪರಾಧವಾಗಿದ್ದು, ಅಂಥವನಿಗೆ 5 ವರ್ಷ ಜೈಲು ಶಿಕ್ಷೆ ಎಂದು ಮಲಹೊರುವ ಪದ್ದತಿ ನಿಷೇಧ ಕಾನೂನು ಹೇಳುತ್ತದೆ. ಆದರೂ, ಹಲವು ರಾಜ್ಯಗಳಲ್ಲಿ ಈಗಲೂ ಈ ಕೆಲಸ ಚಾಲ್ತಿಯಲ್ಲಿದೆ. ಈ
ರಾಜ್ಯಗಳ ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಬರೋಬ್ಬರಿ 23,093 ಜಾಡಮಾಲಿಗಳಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಉತ್ತರಪ್ರದೇಶ (17,619), ಮೂರನೇ ಸ್ಥಾನದಲ್ಲಿ ತ್ರಿಪುರ (17,332), ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ (15,375)ವಿದ್ದರೆ, 11,949 ಮಂದಿ ಜಾಡ ಮಾಲಿಗಳಾಗಿದ್ದಾರೆ. ಪಂಜಾಬ್ 5ನೇ ಸ್ಥಾನದಲ್ಲಿದೆ.
ಚಂಡೀಗಡದಲ್ಲಿ ಮಾತ್ರ ಒಬ್ಬರೇ ಒಬ್ಬರು ಮಲಹೊರುವ ಕಾರ್ಮಿಕರಿಲ್ಲ ಎಂದು ಗಣತಿ ವರದಿ ಹೇಳಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ವಿಜಯ್ ಸಾಂಪ್ಲಾ, ಮಲಹೊರುವವರ ಸಂಖ್ಯೆ ಗಣತಿಯಲ್ಲಿ ಹೇಳಿರುವುದಕ್ಕಿತ ಹೆಚ್ಚಿರಬಹುದು. ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಿದೆ. ಇವರಿಗಾಗಿ ಪುನರ್ವಸತಿ ಕಾರ್ಯಕ್ರಮ ಆಯೋಜಿಸಬೇಕಾದ ಅಗತ್ಯವಿದೆ' ಎಂದಿದ್ದಾರೆ. ಇದೇ ವೇಳೆ, ಗ್ರಾಮೀಣ ಪ್ರದೇಶದ ಜನ ಈ ಪದ್ಧತಿ ಕೊನೆಗಾಣಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುತ್ತಿಲ್ಲ. ಇಂತಹ ಅಮಾನವೀಯ ಪದ್ಧತಿಯ ನಿರ್ಮೂಲನೆಗೆ ಕಾನೂನನ್ನು ಅನುಷ್ಠಾನ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ. ಸರ್ಕಾರಗಳು ಇದನ್ನು ಕಡೆಗಣಿಸಿರುವುದು ವಿಷಾದನೀಯ' ಎಂದಿದ್ದಾರೆ ಪಂಜಾಬ್ ವಿವಿ ನಿವೃತ್ತ ಪ್ರೊಫೆಸರ್ ಮನ್ಜೀತ್ ಸಿಂಗ್.
ಎಲ್ಲೆಲ್ಲಿ ಎಷ್ಟೆಷ್ಟು?
ದೇಶದಲ್ಲಿರುವ ಒಟ್ಟು
ಮಲಹೊರುವ ಕಾರ್ಮಿಕರು 18.06 ಲಕ್ಷ
ಮಧ್ಯಪ್ರದೇಶ 23,093
ಉತ್ತರಪ್ರದೇಶ 17,619
ತ್ರಿಪುರ 17,332
ಕರ್ನಾಟಕ 15,375
ಪಂಜಾಬ್ 11,949
ಹರ್ಯಾಣ 42
ಹಿಮಾಚಲ 4
ಚಂಡೀಗಡ 0
Advertisement