ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ(ಎನ್ಜೆಎಸಿ)ಕ್ಕೆ ಗಣ್ಯವ್ಯಕ್ತಿಗಳಿಬ್ಬರನ್ನು ಆಯ್ಕೆ ಮಾಡಲು ಚಿಂತನೆ ನಡೆಸುತ್ತಿದ್ದರೆ, ಅಂಥವರನ್ನು ಇಲ್ಲಿ (ಸುಪ್ರೀಂಕೋರ್ಟ್)ಗೂ ಕರೆದು ಕೊಂಡು ಬನ್ನಿ. ವಕೀಲರು ಮತ್ತು ನ್ಯಾಯಾಧೀಶರು ಇಲ್ಲಿ ಯಾಕಿರಬೇಕು? ಎನ್ಜೆಎಸಿಗೆ ಇಬ್ಬರು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡದ್ದು ಹೀಗೆ. ಇಂಥ ಕ್ರಮಗಳಿಂದ ಯಾವುದೇ ಪ್ರಯೋಜನ ಇಲ್ಲ. ಜನಸಾಮಾನ್ಯರನ್ನು ಎನ್ಜೆಎಸಿ ಸದಸ್ಯರನ್ನಾಗಿ ಮಾಡುವುದು ಸರಿಯಲ್ಲ.
ಇದರಿಂದ ಪ್ರಯೋಜನವೂ ಇಲ್ಲ ಎಂದು ನ್ಯಾ. ಜೆ.ಎಸ್. ಖೆಹರ್ ಅವರಿದ್ದ ಐವರು ಸದಸ್ಯರ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.
ಎನ್ಜೆಎಸಿಯ ಸಾಂವಿಧಾನಿಕ ಮಾನ್ಯತೆ ಕುರಿತ ಅಂತಿಮ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಳೆದ 31 ದಿನಗಳಿಂದ ಪೀಠವು ಎನ್ಜೆಎಸಿ ಕುರಿತು
ವಿಚಾರಣೆ ನಡೆಸುತ್ತಿತ್ತು.ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಗ್ರಾಹಕ ಆಯೋಗ, ನ್ಯಾಯಮಂಡಳಿಗಳಲ್ಲಿ ಗಣ್ಯವ್ಯಕ್ತಿಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಹಾಗಿದ್ದ ಮೇಲೆ ಎನ್ಜೆಎಸಿಯಲ್ಲಿ ಯಾಕೆ ಜಾಗ ಕೊಡಬಾರದು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಎನ್ಜೆಎಸಿಗೆ ನೇಮಕ ವಾಗುವ ಇಬ್ಬರು ಗಣ್ಯ ವ್ಯಕ್ತಿಗಳ ಆಯ್ಕೆಗೆ ಸಂಬಂಧಿಸಿದ ನಿಯಮಾವಳಿ ರೂಪಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಗಣ್ಯವ್ಯಕ್ತಿಗಳನ್ನು ಎನ್ಜೆಎಸಿಗೆ ನೇಮಿಸುವ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Advertisement