ನವದೆಹಲಿ: ಕಳೆದ ವರ್ಷ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಮುಂದಾಗಿದ್ದ ತಮಿಳುನಾಡು ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ಕೋರಿದ್ದ ಕೇಂದ್ರ ಸರ್ಕಾರದ ಮೇಲ್ಮನವಿ ವಿಚಾರಣೆ ವೇಳೆ ಗುರುವಾರ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ಕುರಿತ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಜೆಐ ಎಚ್.ಎಲ್. ದತ್ತು ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠದ ಅಭಿಪ್ರಾಯದ ಸಾರ ಇಂತಿದೆ: 'ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಯೊಬ್ಬ ಕೊನೇ ಉಸಿರಿರುವವರೆಗೆ ಜೈಲಿನಲ್ಲೇ ಕಳೆಯಬೇಕು ಎಂಬುದಕ್ಕಿಂತ ಆತನಿಗೆ ಮರಣದಂಡನೆ ವಿಧಿಸುವುದೇ ಸೂಕ್ತ. ನಾಳೆಯ ಭರವಸೆ ಮೇಲೆ ನಾವೆಲ್ಲಾ ಬದುಕುತ್ತೇವೆ. ಆದರೆ, ಜೀವಾವಧಿ ಶಿಕ್ಷೆ ಅನುಭವಿಸುವ ವ್ಯಕ್ತಿಗೆ ಅಂತಹ ಭರವಸೆಯೇ ಇರುವುದಿಲ್ಲ.
ಹಾಗಾದರೆ, ಅದು ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿರುವ ನಮ್ಮ ಶಿಕ್ಷಾ ವ್ಯವಸ್ಥೆಯ ಉದ್ದೇಶಕ್ಕೇ ವಿರುದ್ಧ. ಪರಿವರ್ತನೆಯಿಂದ ಪ್ರತಿಫಲವೇ ಇಲ್ಲವೆನ್ನುವುದಾದರೆ ಕೈದಿಯೊಬ್ಬ ಯಾಕೆ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಮನಸ್ಸು ಮಾಡುತ್ತಾನೆ. ಆದ್ದರಿಂದ ಜೀವಾವಧಿ ಶಿಕ್ಷೆಯ ಹಿಂದಿನ ತಾರ್ಕಿಕತೆಯೇ ಪ್ರಶ್ನಾರ್ಹ''. ಈ ಮೂಲಕ ರಾಜೀವ್ ಗಾಂಧಿ ಹಂತಕರಿಗೆ ಗಲ್ಲು ಶಿಕ್ಷೆಯೇ ಸೂಕ್ತ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.
Advertisement