ನವದೆಹಲಿ: ಲೇಖಕ ಚೇತನ್ ಭಗತ್ ಅವರ ನೂತನ ಪುಸ್ತಕ ಆಗಸ್ಟ್ 19 ಕ್ಕೆ ಬಿಡುಗಡೆಯಾಗುತ್ತಿದೆ. ಈ ಬಾರಿ ಬಿಡುಗಡೆಯಾಗುತ್ತಿರುವ ಪುಸ್ತಕ ಕಾದಂಬರಿಯಾಗಿರದೇ ದೇಶವನ್ನು ಉತ್ತಮಗೊಳಿಸುವ ಕುರಿತಾದ ಪುಸ್ತಕವಾಗಿದೆ.
ಈ ವರೆಗೂ ಆರು ಕಾದಂಬರಿಗಳನ್ನು ಬರೆದಿರುವ ಚೇತನ್ ಭಗತ್, ಈ ಬಾರಿ ಮೇಕಿಂಗ್ ಇಂಡಿಯಾ ಆಸಮ್(Making India Awesome) ಹೆಸರಿನ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಭಾರತವನ್ನು ಉತ್ತಮಗೊಳಿಸುವ ನನ್ನ ಕನಸುಗಳ ಕುರಿತದ್ದಾಗಿದೆ ಎಂದು ಚೇತನ್ ಭಗತ್ ಹೇಳಿದ್ದಾರೆ.
ಕಾದಂಬರಿಯಿಂದ ಹೊರತಾದ ಚೇತನ್ ಭಗತ್ ಅವರ ಪ್ರಥಮ ಪುಸ್ತಕ ವಾಟ್ ಯಂಗ್ ಇಂಡಿಯಾ ವಾಂಟ್ಸ್ 2012 ರ ಅಗಸ್ಟ್ ನಲ್ಲಿ ಪ್ರಕಟವಾಗಿತ್ತು. ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ಅರ್ಥ ಮಾಡಿಸಿದರೆ, ಭಾರತವನ್ನು ಅದ್ಭುತ ರಾಷ್ಟ್ರವನ್ನಾಗಿಸುವ ಸಮಾನ ಉದ್ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಚೇತನ್ ಭಗತ್ ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಯುವ ಪೀಳಿಗೆ ರಾಷ್ಟ್ರೀಯ ವಿಚಾರಗಳ ಬಗ್ಗೆ ಪದೇ ಪದೇ ತಪ್ಪು ಗ್ರಹಿಕೆಗೊಳಗಾಗುತ್ತಿದ್ದಾರೆ. ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಲು ಬಿಡುಗಡೆಯಾಗಲಿರುವ ಪುಸ್ತಕ ಸಹಾಯಕಾರಿಯಾಗಲಿದೆ. ಭಾರತ ಎದುರಿಸುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಧಾರ್ಮಿಕ ಮೂಲಭೂತವಾದ, ಅನಕ್ಷರತೆಗಳ ಬಗ್ಗೆ ಈ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಲಾಗಿದ್ದು ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗಿದೆ.
Advertisement