ನವದೆಹಲಿ: ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂಬ ಅಡ್ವಾಣಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೂ.19 ರಂದು ಅಡ್ವಾಣಿ ಅವರನ್ನು ಭೇಟಿ ಮಾಡಲಿದ್ದಾರೆ.
ದೆಹಲಿಯಲ್ಲಿರುವ ಅಡ್ವಾಣಿ ನಿವಾಸಕ್ಕೆ ಸಂಜೆ 6 ಗಂಟೆ ವೇಳೆಗೆ ಭೇಟಿ ನೀಡಲಿರುವ ಅರವಿಂದ್ ಕೇಜ್ರಿವಾಲ್, ಅಡ್ವಾಣಿ ಅವರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಅಡ್ವಾಣಿ ಮತ್ತೆ ತುರ್ತು ಪರಿಸ್ಥಿತಿ ಎದುರಾಗುವ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ಭೇಟಿ ಮಾಡಲು ಕೇಜ್ರಿವಾಲ್ ತುದಿಗಾಲಲ್ಲಿ ನಿಂತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ರಾಜಕೀಯ ವಿದ್ಯಾಮಾನಗಳ ಬಗ್ಗೆ ಮಾತನಾಡಿದ್ದ ಅಡ್ವಾಣಿ, ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಎದುರಿಸುವಂತಹ ಸ್ಥಿತಿ ಬಂದ್ರೂ ಬರಬಹುದು. ಅದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದರು. ಅಡ್ವಾಣಿ ಹೇಳಿಕೆಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದ ದೆಹಲಿ ಸಿ.ಎಂ ಅರವಿಂದ್ ಕೇಜ್ರಿವಾಲ್ ಅಡ್ವಾಣಿ ಹೇಳಿಕೆ ಸರಿಯಾಗಿದೆ, ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬಂದರೂ ಬರಬಹುದು, ಆದರೆ ಇದರ ಮೊದಲ ಪ್ರಯೋಹ್ಗ ದೆಹಲಿಯಲ್ಲಿ ನಡೆಯಲಿದೆಯೇ ಎಂದು ಪ್ರಶ್ನಿಸಿದ್ದರು.
Advertisement