ಪ್ರಪಂಚದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಗುಜರಾತ್ ನಲ್ಲಿ ನಡೆದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರ ಪ್ರಮುಖ್ ಸ್ವಾಮೀಜಿಯೊಂದಿಗೆ ನನ್ನ ಆಧ್ಯಾತ್ಮಿಕ ಅನುಭವಗಳು('Transcendence: My Spiritual Experiences with Pramukh Swamiji') ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಷಾ, ವಿಶ್ವದ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಿಲ್ಲ, ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅಮಿತ್ ಷಾ ಹೇಳಿದ್ದಾರೆ.
ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಗುಜರಾತ್ ಗೆ ಪ್ರವೇಶಿಸದಂತೆ ನಿಷೇಧ ಎದುರಿಸಿದ್ದ ಸಂದರ್ಭವನ್ನು ಸ್ಮರಿಸಿದ ಅಮಿತ್ ಷಾ, 2 ವರ್ಷಗಳ ಕಾಲ ತೊಂದರೆ ಅನುಭವಿಸಿದ್ದಾಗ ಭಾತತದಲ್ಲಿರುವ ಪ್ರತಿಯೊಂದು ಶಕ್ತಿಪೀಠ, ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದೆ. ಗುಜರಾತ್ ನಲ್ಲಿರುವುದನ್ನು ಹೊರತುಪಡಿಸಿ 12 ಜೋತಿರ್ಲಿಂಗಗಳನ್ನೂ ದರ್ಶನ ಮಾಡಿದ್ದೆ ಎಂದು ಹೇಳಿದ್ದಾರೆ.
ಶಂಕರಾಚಾರ್ಯ, ಪ್ರಮುಖ್ ಸ್ವಾಮೀ ಅವರಂತಹ ಶ್ರೇಷ್ಠ ಸನ್ಯಾಸಿಗಳ ಶಕ್ತಿಯಿಂದ ಹಿಂದೂ ಧರ್ಮ ಮತ್ತಷ್ಟು ಬಲಿಷ್ಠಗೊಂಡಿದೆ ಎಂದು ಅಮಿತ್ ಷಾ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲ, ಧರ್ಮ, ರಾಜ್ಯಕ್ಕಿಂತ ದೊಡ್ಡರು, ರಾಜದಂಡಕ್ಕಿಂತಲೂ, ಧರ್ಮದಂಡ ಶ್ರೇಷ್ಠವಾದದ್ದು, ಅದು ಎಂದಿಗೂ ಜನರನ್ನು ಸಂತೋಷದಿಂದ ಇರಿಸುತ್ತದೆ ಎಂದು ಹೇಳಿದ್ದಾರೆ.
Advertisement