ಹೈದರಾಬಾದ್: ನಾಮನಿರ್ದೇಶಿತ ಸದಸ್ಯರೊಬ್ಬರಿಗೆ ಲಂಚ ನೀಡಿ ಬಂಧನಕ್ಕೊಳಗಾಗಿದ್ದ ತೆಲಂಗಾಣ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಸೇರಿ ಮೂವರಿಗೆ ಹೈದರಾಬಾದ್ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತರಾಗಿದ್ದ ರೇವಂತ್ ರೆಡ್ಡಿ, ಸೆಬಾಸ್ಟಿಯನ್ ಹಾಗೂ ಉದಯ್ ಕುಮಾರ್ ಸಿಂಹ ಅವರಿಗೆ ಹೈದರಾಬಾದ್ ನ್ಯಾಯಾಲಯವು ನಿಯಮಬದ್ಧ ಜಾಮೀನು ನೀಡಿದ್ದು, ಮೂವರು ಆರೋಪಿಗಳಿಂದಲೂ ನ್ಯಾಯಾಲಯವು 5 ಲಕ್ಷ ಠೇವಣಿ ಇರಿಸಿಕೊಂಡಿದ್ದು, ದೇಶದಿಂದ ಹೊರಹೋಗದಂತೆ ತಿಳಿಸಿ ಪಾಸ್ ಪೋರ್ಟ್ ನ್ನು ವಶಕ್ಕೆ ಪಡೆದುಕೊಂಡಿದೆ.
ತೆಲಂಗಾಣ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಹಾಗೂ ಮತ್ತಿಬ್ಬರು ಆರೋಪಿಗಳು ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್ ಸದಸ್ಯ ಸ್ಟೀಫನ್ ಗೆ 50 ಲಕ್ಷ ಹಣ ನೀಡುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದರು.
ವಿಧಾನ ಪರಿಷತ್ ನ 6 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಟಿಡಿಪಿ ಪರ ಮತ ಹಾಕುವಂತೆ ಎಂಎಲ್ ಸಿಗೆ ಶಾಸಕ ರೇವಂತ್ ರೆಡ್ಡಿ ಅವರು ಆಮಿಷವೊಡ್ಡಿದ್ದಾರೆಂದು ಹೇಳಿ ಸ್ಟೀಫನ್ ಎಲ್ವಿನ್ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಭ್ರಷ್ಟಾಚಾರ ನಿಗ್ರಹದ ಅಧಿಕಾರಿಗಳು ರೇವಂತ್ ರೆಡ್ಡಿ ಹಾಗೂ ಮತ್ತಿಬ್ಬರು ಆರೋಪಿಗಳು ಸ್ಟೀಫನ್ ಗೆ ಹಣ ನೀಡುವ ವೇಳೆ ಸ್ಥಳಕ್ಕೆ ಬಂದು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಆಮಿಷ ನೀಡುವ ವೇಳೆ ಸಚಿವರಿಗೆ ರೇವಂತ್ ರೆಡ್ಡಿ ಅವರು ಟಿಡಿಪಿ ಪರ ಮತ ಹಾಕಿದರೆ 5 ಕೋಟಿ ಹಣ ನೀಡುವುದಾಗಿ ಹೇಳಿದ್ದರು ಎಂದು ಹೇಳಲಾಗುತ್ತಿತ್ತು.
Advertisement