ಉಗ್ರ ಅಫ್ಜಲ್ ಗುರು (ಸಂಗ್ರಹ ಚಿತ್ರ)
ಉಗ್ರ ಅಫ್ಜಲ್ ಗುರು (ಸಂಗ್ರಹ ಚಿತ್ರ)

ಪಿಡಿಪಿಗೆ ಉಗ್ರ ಅಫ್ಜಲ್ ಗುರು ಅವಶೇಷ ಬೇಕಂತೆ..!

ಕಣಿವೆ ರಾಜ್ಯದ ಬಿಜೆಪಿಯ ಮೈತ್ರಿ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಕೆಲ ಶಾಸಕರು ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ..
Published on

ನವದೆಹಲಿ: ಕಣಿವೆ ರಾಜ್ಯದ ಬಿಜೆಪಿಯ ಮೈತ್ರಿ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಕೆಲ ಶಾಸಕರು ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ ಅವಶೇಷಗಳು ಬೇಕು ಎಂದು ಪಟ್ಟು ಹಡಿದಿದ್ದಾರೆ.

ನಿನ್ನೆಯಷ್ಟೇ ಕಣಿವೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯೀದ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಪಿಡಿಪಿ ಶಾಸಕರು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸಂಸತ್ ಮೇಲಿನ ದಾಳಿ ಪ್ರಕರಣದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಫ್ಜಲ್ ಗುರು ಅವಶೇಷಗಳನ್ನು ಆತನ ಕುಟುಂಬಕ್ಕೆ ನೀಡುವಂತೆ ಪಿಡಿಪಿ ಶಾಸಕರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪಿಡಿಪಿಯ 8 ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದು ನ್ಯಾಯಾಂಗದ ಅವಹೇಳನ ಎಂದು ಕಿಡಿಕಾರಿದ್ದಾರೆ.

ಆದರೆ ಮಿತ್ರಪಕ್ಷ ಪಿಡಿಪಿ ಶಾಸಕರ ಈ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಅಫ್ಜಲ್ ಗುರುವಿನ ಅವಶೇಷಗಳನ್ನು ನೀಡುವಂತೆ ಆತನ ಕುಟುಂಬ ಸದಸ್ಯರು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಆಗ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈಗ ಪಿಡಿಪಿ ಶಾಸಕರ ಆಗ್ರಹಕ್ಕೂ ಕೂಡ ಕೇಂದ್ರ ಸರ್ಕಾರ ಅದೇ ಧೋರಣೆಯನ್ನು ಮುಂದುವರೆಸುತ್ತಿದೆ.

ಇನ್ನು ಪರಸ್ಪರ ಎರಡು ವಿರುದ್ಧ ದಿಕ್ಕಿನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಕಣಿವೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದು, ಸರ್ಕಾರ ರಚನೆ ಬಳಿಕ ಮುಖ್ಯಮಂತ್ರಿಯಾದಿಯಾಗಿ ಪಿಡಿಪಿಯ ಶಾಸಕರು ನೀಡುತ್ತಿರುವ ಹೇಳಿಕೆಗಳು ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಿಮಿಸಿವೆ. ನಿನ್ನೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿಡಿಪಿಯ ಮುಫ್ತಿ ಮೊಹಮದ್ ಸಯ್ಯೀದ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಪಾಕಿಸ್ತಾನ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳನ್ನು ಹೊಗಳಿದ್ದರು.

'ಕಣಿವೆ ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಯಲು ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಕಾರಣ. ಶಾಂತಿಯುತ ಮತದಾನಕ್ಕಾಗಿ ಭಯೋತ್ಪಾಕದ ಸಂಘಟನೆಗಳು ಶ್ರಮಿಸಿದ್ದವು' ಎಂದು ಮುಫ್ತಿ ಮೊಹಮದ್ ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಿಡಿಪಿಯ ಕೆಲ ಶಾಸಕರು ಮತ್ತೆ ವಿವಾದಾತ್ಮಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಚರ್ಚಿಸುವ ಮೂಲಕ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತಿದ್ದಾರೆ.

2001ರಲ್ಲಿ ನಡೆದಿದ್ದ ಸಂಸತ್ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಒಟ್ಟು 9 ಯೋಧರು ಧಾರುಣವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದ ರೂವಾರಿಯಾಗಿರುವ ಉಗ್ರ ಅಫ್ಜಲ್ ಗುರುವನ್ನು ಕೇಂದ್ರ ಸರ್ಕಾರ ಗಲ್ಲಿಗೇರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com