ಮೈತ್ರಿ ಕಡಿತದತ್ತ ಬಿಜೆಪಿ-ಪಿಡಿಪಿ ಸರ್ಕಾರ..?

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಮೈತ್ರಿ ಸರ್ಕಾರ ರಚನೆ ಮಾಡಿದ್ದ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳು ಮೈತ್ರಿ ಕಡಿದುಕೊಳ್ಳುವತ್ತ ಚಿಂತನೆ ನಡೆಸುತ್ತಿವೆ..
ಸಿಎಂ ಮುಫ್ತಿ ಮೊಹಮದ್ ಮತ್ತು ಪ್ರಧಾನಿ ನರೇಂದ್ರ ಮೋದಿ
ಸಿಎಂ ಮುಫ್ತಿ ಮೊಹಮದ್ ಮತ್ತು ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಮೈತ್ರಿ ಸರ್ಕಾರ ರಚನೆ ಮಾಡಿದ್ದ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳು ಮೈತ್ರಿ ಕಡಿದುಕೊಳ್ಳುವತ್ತ ಚಿಂತನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರವಷ್ಟೆ ಪರಸ್ಪರ ಕೈ ಕುಲುಕಿ ಸರ್ಕಾರ ರಚನೆ ಮಾಡಿದ್ದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಕೇವಲ 7 ದಿನಗಳಲ್ಲೇ ವಿಚ್ಛೇದನ ಹಾದಿ ಹಿಡಿದಿದೆ. ಅಧಿಕಾರ ಸ್ವೀಕರಿಸಿದ ದಿನದಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿರುವ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಅವರ ನಡವಳಿಕೆಯಿಂದ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಸಿಲುಕಿದ್ದಾರೆ. ಮುಪ್ತಿ ಮಹಮ್ಮದ್ ಸಯೀದ್ ನಡವಳಿಕೆಯಿಂದ ಬೇಸರಗೊಂಡಿರುವ ಸಂಘ ಪರಿವಾರದ ನಾಯಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರು ಪರಿಶೀಲನೆ ನಡೆಸುವಂತೆ ಬಿಜೆಪಿ ವರಿಷ್ಠರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಮುಸ್ಲಿಂ ಲೀಗ್‌ನ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂಭಟ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸಿಎಂ ಮುಫ್ತಿ ಮಹಮ್ಮದ್ ಸಯೀದ್ ಅವರು ತೆಗೆದುಕೊಂಡ ಕ್ರಮ ಇದೀಗ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಕಣ್ಣು ಕಂಪಾಗುವಂತೆ ಮಾಡಿದೆ. ಹೀಗಾಗಿ ಸರ್ಕಾರ ಹೋದರೂ ಚಿಂತೆಯಿಲ್ಲ. ದೇಶ ಹಾಗೂ ಭದ್ರತೆ ವಿಷಯದಲ್ಲಿ ಎಂದಿಗೂ ರಾಜಿಯಾಗಬಾರದು. ಅದರಲ್ಲೂ ರಾಷ್ಟ್ರದ್ರೋಹಿಯಾಗಿರುವ ಮಸರತ್ ಅಲಂಭಟ್ ಪರ ಮುಖ್ಯಮಂತ್ರಿ ವಕಾಲತ್ತು ವಹಿಸಿರುವುದು ಸರಿಯಲ್ಲ ಎಂದು ಕೆಲ ಬಿಜೆಪಿ ನಾಯಕರೇ ಹೇಳಿದ್ದಾರೆ. ಹೀಗಾಗಿ ಸಿಎಂ ಮುಫ್ತಿ ಮೊಹಮದ್ ಸಯ್ಯೀದ್ ನಡವಳಿಕೆ ಬಿಜೆಪಿಗೆ ಇರಿಸು-ಮುರಿಸು ತಂದಿದೆ. ಹೀಗಾಗಿ ಪಿಡಿಪಿಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಆರ್‌ಎಸ್‌ಎಸ್ ನಾಯಕರು ಬಿಜೆಪಿ ಮೇಲೆ ಒತ್ತಡ ಹಾಕಿದ್ದಾರೆ.  

'ಯಾವುದೇ ಕಾರಣಕ್ಕೂ ಪಿಡಿಪಿ ಒತ್ತಡಕ್ಕೆ ಮಣಿಯಬಾರದು. ರಾಷ್ಟ್ರದ್ರೋಹಿ ಹಾಗೂ ಭಯೋತ್ಪಾದನೆ ವಿಷಯದಲ್ಲಿ ರಾಜಿಯಾದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಮುಫ್ತಿ ಸರ್ಕಾರದಿಂದ ಹೊರಬರಲು ಅಧಿಕಾರ ತ್ಯಾಗಕ್ಕೆ ಸಿದ್ಧರಾಗಿ' ಎಂದು ಆರ್‌ಎಸ್‌ಎಸ್ ಸೂಚನೆ ಕೊಟ್ಟಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಈ ವಿವಾದಾತ್ಮಕ ನಡೆಯಿಂದ ಬೇಸತ್ತಿರುವ ಬಿಜೆಪಿ ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಮುಂಚೂಣಿ ನಾಯಕನಾಗಿದ್ದ ಮಸರತ್ ಆಲಂಭಟ್ ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ಗಲಭೆ ಮತ್ತು ಕೊಲೆ ಪ್ರಕರಣಗಳ ಪ್ರಮುಖ ರೂವಾರಿಯಾಗಿದ್ದಾನೆ.  2010ರಲ್ಲಿ ಕಣಿವೆ ರಾಜ್ಯಾದ್ಯಂತ ನಡೆದ ಗಲಭೆ, ಭದ್ರತಾ ಪಡೆ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಈತನೇ ಮಾಸ್ಟರ್ ಮೈಂಡ್ ಆಗಿದ್ದಾನೆ. 112 ಯುವಕರು ಹಾಗೂ ಭದ್ರತಾ ಪಡೆಗಳ ಹತ್ಯೆ ಮಾಡಿದ ಆರೋಪ ಕೂಡ ಈತನ ಮೇಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com