ನವದೆಹಲಿ/ಮುಂಬೈ: ಕೇಂದ್ರ ಸರ್ಕಾರಕ್ಕೆ ಮತ್ತು ದೇಶದ ಅರ್ಥ ವ್ಯವಸ್ಥೆಗೆ ಸಿಹಿ-ಕಹಿ ಮಿಶ್ರಣ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿನ ಹಣದುಬ್ಬರ ಫೆಬ್ರವರಿ ತಿಂಗಳಲ್ಲಿ ಶೇ.5.37ಕ್ಕೆ ಏರಿಕೆಯಾಗಿದೆ.
ಮೋದಿ ಸರ್ಕಾರ ಕೈಗೊಂಡಿರುವ ಬಿಗಿ ಆರ್ಥಿಕ ಕ್ರಮಗಳಿಂದ ಉತ್ಪಾದನಾ ಕ್ಷೇತ್ರದ ಚಟುವಟಿಕೆಗಳು ಚುರುಕಾಗಿವೆ. ಇದರಿಂದಾಗಿ 2014 ಡಿಸೆಂಬರ್ಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಜನವರಿಯಲ್ಲಿ ಕೈಗಾರಿಕಾ ಉತ್ಪಾದನೆ ಶೇ.2.6ಕ್ಕೆ ಏರಿಕೆಯಾಗಿವೆ. ಕೈಗಾರಿಕಾ ಉತ್ಪಾದನೆ ಏರಿಕೆ: ದೇಶದ ಕೈಗಾರಿಕಾ ಕ್ಷೇತ್ರ ಖುಷಿ ತರುವಂಥ ವಿಚಾರ ಪ್ರಕಟವಾಗಿದ್ದು, ಜನವರಿಯಲ್ಲಿ ಕೈಗಾರಿಕಾ ಕ್ಷೇತ್ರದ ಉತ್ಪಾದನಾ ಪ್ರಮಾಣ ಶೇ.2.6 ಎಂದು ದಾಖಲಾಗಿದೆ.
ಯಂತ್ರೋಪಕರಣಗಳ ಖರೀದಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಉತ್ಪಾದನಾ ಚಟುವಟಿಕೆಗಳಿಂದಾಗಿ ಈ ಪ್ರಮಾಣ ಹೆಚ್ಚಾಗಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ಈ ಮಾಹಿತಿ ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ಹೆಚ್ಚು ಕಮ್ಮಿ ಸ್ಥಿರವಾಗಿರುವ ಹಣಕಾಸು ಕ್ಷೇತ್ರದಿಂದಾಗಿ ಈ ಬೆಳವಣಿಗೆ ಸಾಧಿಸಲಾಗಿದೆ. ಈ ವರ್ಷದ ಜನವರಿ-ಏಪ್ರಿಲ್ ಅವಧಿಯಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಶೇ.2.5ರ ಪ್ರಮಾಣದಲ್ಲಿ ಬೆಳವಣಿಗೆ ದಾಖಲಿಸಿತ್ತು.
ಡಿಸೆಂಬರ್ಗೆ ಹೋಲಿಕೆ ಮಾಡಿದರೆ ಶೇ.0.1 ಹೆಚ್ಚಾಗಿದೆ. ಪಾಲಿಥಿನ್ ಬ್ಯಾಗ್, ಉಕ್ಕು, ಚಿನ್ನಾಭರಣ, ಬಾಯ್ಲರ್ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ತೃಪ್ತಿದಾಯಕ ಸಾಧನೆಗಳಾಗಿವೆ. ವಿಶ್ಲೇಷಕರ ಪ್ರಕಾರ ಇದು ಉತ್ತಮ ಸಾಧನೆಯಲ್ಲ .
ಹಣದುಬ್ಬರ ಏರಿಕೆ: ಫೆಬ್ರವರಿಯ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದ ಹಣದುಬ್ಬರ ಶೇ.5.37ಕ್ಕೆ ತಲುಪಿದೆ. ಲಘು ಪಾನೀಯಗಳು, ಆಹಾರ ವಸ್ತುಗಳ ಬೆಲೆ ಹೆಚ್ಚಾಗಿದ್ದರಿಂದ ಇದು ಹೆಚ್ಚಾಗಿದೆ. ಗ್ರಾಮೀಣದ ಚಿಲ್ಲರೆ ಮಾರುಕಟ್ಟೆ ಹಣದುಬ್ಬರ ಶೇ.5.79. ನಗರದ ಹಣದುಬ್ಬರ ಶೇ.4.95. ತರಕಾರಿಗಳ ಬೆಲೆ ಶೇ. 13.01, ಬೇಳೆ ಕಾಳುಗಳ ಬೆಲೆ ಶೇ.10.61, ಆಹಾರ, ಪಾನೀಯಗಳ ಬೆಲೆ ಶೇ.6.76 ಹೆಚ್ಚಳವಾಗಿದ್ದರಿಂದಾಗಿ ಹಣದುಬ್ಬರ ಹೆಚ್ಚಾಗಿದೆ. ತಜ್ಞರ ಪ್ರಕಾರ ಇದೊಂದು ತಾತ್ಕಾಲಿಕ ಬೆಳವಣಿಗೆ. ಮೋದಿ ಸರ್ಕಾರದ ಬಜೆಟ್ ಮತ್ತು ಬದಲಾಗುತ್ತಿರುವ ಹಣಕಾಸು ನೀತಿ ಅದರ ಪ್ರಮಾಣ ತಗ್ಗಬಹುದೆಂದು ಪ್ರತಿಪಾದಿಸಿದ್ದಾರೆ.
ಪುಟಿದ ಮಾರುಕಟ್ಟೆ
ರಾಜ್ಯಸಭೆಯಲ್ಲಿ ವಿಮಾ ವಿಧೇಯಕ ಅಂಗೀಕಾರಗೊಂಡಿದ್ದರಿಂದ ಬಾಂಬೆ ಷೇರುಪೇಟೆ ಮತ್ತು ನಿಫ್ಟಿ ಸೂಚ್ಯಂಕ ಪುಟಿದೆದ್ದಿತು. ಸೆನ್ಸೆಕ್ಸ್ 271 ಅಂಕ ಏರಿಕೆಯಾಗಿ, 28,772ರಲ್ಲಿ ಮುಕ್ತಾಯವಾಯಿತು. ನಿಪಿs್ಟ 76 ಅಂಕ ಏರಿಕೆಯಾಗಿ ದಿನದ ಅಂತ್ಯಕ್ಕೆ 8,776ರಲ್ಲಿ ಕೊನೆಗೊಂಡಿತು. ಜತೆಗೆ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯವೂ ಏರಿಕೆಯಾಗಿದೆ.
Advertisement