ಖನಿಜ ಸಂಪತ್ತಿನ ಅರಿವು ಇಲ್ಲದ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ತರಾಟೆ
ನವದೆಹಲಿ: ರಾಜ್ಯದಲ್ಲಿರುವ ಖನಿಜ ಸಂಪತ್ತು ಎಷ್ಟಿದೆ, ಎಷ್ಟು ಪ್ರಮಾಣದಲ್ಲಿ ಅದಿರು ಗಣಿಗಾರಿಕೆ ಮಾಡಲಾಗಿದೆ ಎಂಬುದರ ಬಗ್ಗೆಯೇ ನಿಮ್ಮ ಬಳಿಯೇ ಮಾಹಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಅರಣ್ಯ ಪೀಠ ಕರ್ನಾಟಕ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ.
ಅಕ್ರಮ ಗಣಿಗಾರಿಕೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗೊಗಾಯ್ ಮತ್ತು ನ್ಯಾಯಮೂರ್ತಿ ರಮಣ ಅವರ ಪೀಠವು ಕರ್ನಾಟಕದಲ್ಲಿ ಖನಿಜ ಸಂಪತ್ತು ಲೂಟಿ ಆಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರಂಭದಲ್ಲಿ ವಾದ ಮಂಡಿಸಿದ ಅಮಿಕಸ್ ಕ್ಯೂರಿ ಶಾಮ್ ದಿವಾನ್, ಇ ಹರಾಜಿನಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬಂದಿದೆ.ಸಿ.ಕೆಟಗರಿ ಗಣಿ ಗುತ್ತಿಗೆ ಮಾಲೀಕರಿಗೂ ಇ ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಕೋರಿದರು.
ಸಮಾಜ ಪರಿವರ್ತನ ಸಮುದಾಯದ ಪರವಾದ ಮಾಡಿದ ಪ್ರಶಾಂತ್ ಭೂಷಣ್, ಭಾರಿ ಅಕ್ರಮ ಎಸಗಿದ್ದರಿಂದ ಸಿ ಕೆಟಗರಿಗೆ ಸೇರಿಸಲಾಗಿದೆ. ಈಗ ಅಕ್ರಮ ಎಸಗಿದ ಸಿ ಕೆಟಗರಿ ಗುತ್ತಿಗೆ ಮಾಲೀಕರಿಗೂ ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವುದು ಸರಿಯಲ್ಲ ಎಂದು ವಾದಿಸಿದರು. ಕರ್ನಾಟಕ ಸರ್ಕಾರದ ಪರ ವಕೀಲ ರಾಜು ರಾಮಚಂದ್ರನ್ ವಾದ ಮಂಡಿಸುವಾಗ, ಕರ್ನಾಟಕ ಅದಿರು ಪ್ರಮಾಣ ಎಷ್ಟು ಎಂಬ ನ್ಯಾಯಪೀಠದ ಪ್ರಶ್ನೆಗೆ ಸೂಕ್ತ ಉತ್ತರ ಬರಲಿಲ್ಲ. ಅಸಮಾಧಾನಗೊಂಡ ನ್ಯಾಯಪೀಠವು, ಪ್ರತಿರಾಜ್ಯವೂ ತಮ್ಮ ಖನಿಜ ಸಂಪತ್ತು ಎಷ್ಟಿದೆ ಎಂಬುದನ್ನು ತಿಳಿದುಕೊಂಡಿರಬೇಕು. ಆದರೆ ನಿಮಗೆ ಎಷ್ಟು ಅದಿರು ಇದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ನಮಗೆ ಅಚ್ಚರಿಯಾಗಿದೆ.
ವರ್ಷದಿಂದಲೂ ಇದೇ ಉತ್ತರ ನೀಡುತ್ತಿದ್ದೀರ, ನಮ್ಮ ಮುಂದೆ ಇರುವ ಫೋಟೊಗಳೇ ಎಲ್ಲವನ್ನೂ ಹೇಳುತ್ತಿವೆ. ಕರ್ನಾಟಕದಲ್ಲಿ ಖನಿಜ ಸಂಪತ್ತು ಲೂಟಿ ಆಗುತ್ತಿದೆ. ಅಲ್ಲಿ ಏನಾಗುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲ. ನಾವು ನಿಮ್ಮ ವಾದ ಕೇಳುವುದಿಲ್ಲ ಎಂದು ಹೇಳಿತು. ಸಿ.ಕೆಟಗರಿ ಗಣಿಗುತ್ತಿಗೆ ಕಳೆದುಕೊಂಡ ಮಾಲಿಕರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸುವಂತೆ ಸಿ ಕೆಟಗರಿ ಮಾಲೀಕರ ಪರ ವಕೀಲರಿಗೆ ನ್ಯಾಯ ಪೀಠ ಸೂಚಿಸಿತು. ಮುಂದಿನ ವಿಚಾರಣೆ ಏಪ್ರಿಲ್ 24ಕ್ಕೆ ಮುಂದೂಡಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ