ಮುಂಬೈ: ಅಮ್ಮ ನನಗೆ ಮದುವೆ ಮಾಡ ಬಯಸಿದ್ದಳು. ಒಳ್ಳೆಯ ಗಂಡು ಹುಡುಕುತ್ತಿದ್ದಳು. ಅದಕ್ಕಾಗಿ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಬಳಿ ಒಳ್ಳೆಯ ವರನಿಗಾಗಿ ಜಾಹೀರಾತು ನೀಡಲು ಹೊರಟಳು. ಆದರೆ, ಯಾವ ಪ್ರಮುಖ ಪತ್ರಿಕೆಗಳೂ ಜಾಹೀರಾತು ಸ್ವೀಕರಿಸಲೇ ಇಲ್ಲ!
ಮೊದಲು ಡಿಎನ್ಎ ಬಳಿಕ ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ಥಾನ್ ಟೈಮ್ಸ್ ಕಚೇರಿ ಅಲೆದಾಡಿದ್ದಾಯಿತು. ಆದರೆ, ಯಾವೊಂದು ಪತ್ರಿಕೆಯೂ ಜಾಹೀರಾತು ಪ್ರಕಟಿಸಲು ಒಪ್ಪಲಿಲ್ಲ. ಈ ಜಾಹೀರಾತಿನಲ್ಲಿ ಇದ್ದದ್ದು ಮೂರೇ ಸಾಲು. 24ರಿಂದ 40 ವರ್ಷ ನಡುವಿನ, ಕೆಲಸದಲ್ಲಿರುವ, ಸಸ್ಯಾಹಾರಿ ಹಾಗೂ ಪ್ರಾಣಿಗಳನ್ನು ಇಷ್ಟಪಡುವ ವರಬೇಕು ಎನ್ನುವುದಷ್ಟೆ. ಆದರೆ, ಹರೀಶ್ ಅಯ್ಯರ್ ಕುಟುಂಬದ ತಾಯಿ ಸಂಗಾತಿ ಹುಡುಕುತ್ತಿದ್ದುದು ತನ್ನ ಪುತ್ರನಿಗೆ!
ಹೌದು, ತನ್ನ ಸಲಿಂಗ ಪುತ್ರನಿಗೆ ಒಳ್ಳೆಯ ಜೋಡಿ ಹುಡುಕಬೇಕು. ಆತನೂ ಸಂಸಾರ ಆರಂಭಿಸಬೇಕು ಎಂದು ಆ ತಾಯಿಯ ಸದಾಶಯವಾಗಿತ್ತು. ಆ ಸದಾಶಯದ, ದೇಶದ ಮೊದಲ ಸಲಿಂಗ ಸಂಗಾತಿಗಾಗಿನ ಜಾಹೀರಾತು ಸಂಪ್ರದಾಯಬದ್ಧ ಭಾರತದಲ್ಲಿ ಕಾನೂನು ವಿರೋಧಿಯಾಗಿ ಕಂಡಿತು. ಇಂಥ ಜಾಹೀರಾತೇ ಅಕ್ರಮ: ಈ ಜಾಹೀರಾತು ಪುರಾಣ ಆರಂಭವಾದದ್ದು ಡಿಎನ್ಎಯಿಂದ. ತನ್ನ ಪುತ್ರನಿಗೆ ಯೋಗ್ಯ ವರಬೇಕು ಎಂದು ಹೇಳಿಕೊಂಡು ಮುಂಬೈ ಮೂಲದ `ಸಲಿಂಗ ಹಕ್ಕು'ಗಳ ಹೋರಾಟಗಾರ ಹರೀಶ್ ಅಯ್ಯರ್ ತಾಯಿ ಡಿಎನ್ಎ ಪತ್ರಿಕೆಯ ಜಾಹೀರಾತು ವಿಭಾಗಕ್ಕೆ ಹೋಗಿದ್ದರು. ಆದರೆ, ಹುಡುಗ ನೊಬ್ಬನಿಗೆ ವರ ಬೇಕು ಎನ್ನುವ ಜಾಹೀರಾತು ಪ್ರಕಟಿಸುವುದು ಕಾನೂನಿಗೆ ವಿರೋಧ ಎಂದು ಹೇಳಿ ಕೈಚೆಲ್ಲಿದರು. ಆ ನಂತರ ಜಾಹೀರಾತು ಪ್ರಕಟಣೆ ಜವಾಬ್ದಾರಿ ನಾನೇ ಹೊತ್ತುಕೊಂಡೆ ಎನ್ನುತ್ತಾರೆ ಹರೀಶ್.
`ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಹೋದೆ. ಅವರು ದೇಶದ ಮೊದಲ `ಗೇ' ಜಾಹೀರಾತು ಪ್ರಕಟಿಸಲು ಆಸಕ್ತಿ ತೋರಿದರ ಆ ಸಂಬಂಧ ಪ್ರಕ್ರಿಯೆಯನ್ನೂ ಆರಂಭಿಸಿದರು. ಆದರೆ, ಮೂರು ಗಂಟೆ ಬಳಿಕ ಪತ್ರಿಕೆ ಕಚೇರಿಯಿಂದ ಕರೆಯೊಂದು ಬಂತು. `ಈ ರೀತಿಯ ಜಾಹೀರಾತು ಪ್ರಕಟಿಸುವುದು ಅಕ್ರಮ ಎಂದು ಪತ್ರಿಕೆಯ ಕಾನೂನು ವಿಭಾಗ ತಿಳಿಸಿದೆ' ಎಂದು ಹೇಳಲಾಯಿತು.
ನಂತರ ಹಿಂದೂಸ್ತಾನ್ ಪತ್ರಿಕೆಯ ಬಳಿ ಹೋದೆ. ಆದರೆ, ಅವರು ಈ ರೀತಿಯ ಜಾಹೀರಾತು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಕೊನೆಯದಾಗಿ ನಾನು ಬಾಗಿಲು ಬಡಿದದ್ದು ಮಿಡ್ ಡೇ ಪತ್ರಿಕೆಯದು. ಅವರು ವಧು- ವರರ ಕಾಲಂನಲ್ಲಿ ಮೊದಲ `ಗೇ' ಜಾಹೀರಾತು ಪ್ರಕಟಿಸುವ ಧೈರ್ಯ ತೋರಿದರು' ಎಂದು ಹರೀಶ್ ಬಜ್ ಫೀಡ್ ವೆಬ್ಸೈಟ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಹರೀಶ್ ಅಯ್ಯರ್ ಅವರು ಸಲಿಂಗ ಸಂಗಾತಿಗಾಗಿ ಜಾಹೀರಾತು ನೀಡಿದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಮಿಡ್ ಡೇ ಏನು ಹೇಳುತ್ತೆ?
ಮದುವೆ ಅನ್ನುವುದು ಎರಡು ಆತ್ಮಗಳ ಮಿಲನ. ಮಾನವ ಹಕ್ಕುಗಳು ಧರ್ಮ, ಜಾತಿ, ಬಣ್ಣ, ಲೈಂಗಿಕ ಆದ್ಯತೆಯ ತಾರತಮ್ಯವಿಲ್ಲದೆ ಎಲ್ಲರಿಗೂ ಅನ್ವಯವಾಗಬೇಕು ಎಂದು ನಂಬಿದವರು ನಾವು. ತಾಯಿಯೊಬ್ಬಳು ತನ್ನ ಸಲಿಂಗ ಪುತ್ರನಿಗೆ ಸೂಕ್ತ ಸಂಗಾತಿಯನ್ನು ಹುಡುಕುವುದರಲ್ಲಿ ತಪ್ಪೇನೂ ಇಲ್ಲ. ಇದು ಸಮಾನ ಸಮಾಜ ಬಯಸುತ್ತೇವೆ. ಇಂಥ ಜಾಹೀರಾತುಗಳು ಮಾಮೂಲಿಯಾಗಬೇಕು. ಭಾರತವು ಎಲ್ಜಿಬಿಟಿ ಸೇರಿ ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ತೋರಬಾರದು ಎನ್ನುವುದು ನಮ್ಮ ನಿಲುವಾಗಿದೆ ಎಂದು ಮಿಡ್ಡೇ ಪತ್ರಿಕೆ ಹೇಳಿಕೊಂಡಿದೆ.
Advertisement