ನವದೆಹಲಿ: ಎಲ್ಲೆಂದರಲ್ಲಿ ಕಸ ಹಾಕಿ ಗಲೀಜು ಮಾಡುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ರಸ್ತೆ ಬದಿಯಲ್ಲಿ ಕಸ ಸುರಿದು ಕೊಳಕು ಮಾಡುವವರು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕಠಿಣ ಕಾನೂನು ತರಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.
ನಾಗರಿಕರು ಎಲ್ಲೆಂದರಲ್ಲಿ ಕಸ ಸುರಿದು ಗಲೀಜು ಮಾಡುತ್ತಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ್ ಯೋಜನೆಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ದೇಶದೆಲ್ಲೆಡೆ ಸ್ವಚ್ಚತೆ ಕಾಪಾಡಲು ಪರಿಣಾಮಕಾರಿಯಾದ ಕಾನೂನು ಜಾರಿಗೆ ತರಲು ಎನ್ ಡಿ ಸರ್ಕಾರ ಮುಂದಾಗಿದೆ.
ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಾನೂನಿಗೆ ತಿದ್ದುಪಡಿ ತರುವ ನಿರೀಕ್ಷೆ ಇದೆ. ಈಗಿರುವ ಕಾನೂನಿನಡಿ ತಪ್ಪಿತಸ್ಥರಿಗೆ ದಂಡ ಅಥವಾ ಶಿಕ್ಷೆ ವಿಧಿಸಲು ಪರಿಸರ ಸಂರಕ್ಷಣಾ ಕಾಯಿದೆ ಸಮ್ಮತಿಸದ ಕಾರಣ ತಿದ್ದುಪಡಿ ತಂದು ಕಾನೂನು ಜಾರಿಗೆ ಚಿಂತಿಸುತ್ತಿದೆ.
ತಿದ್ದುಪಡಿ ಕಾನೂನಿನಲ್ಲಿ ತಪ್ಪಿತಸ್ಥರಿಗೆ ಕೇವಲ ದಂಡ ಮಾತ್ರ ವಿಧಿಸಲಾಗುತ್ತದೆ. ಎಫ್ ಐ ಆರ್ ಇಲ್ಲವೇ ಬಂಧನದ ಅವಕಾಶವಿರುವುದಿಲ್ಲ. ಕಾನೂನನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ. ಕೇವಲ ಕಸ ಮಾತ್ರವಲ್ಲದೇ, ನಿಷೇಧಿತ ಪ್ಲಾಸ್ಟಿಕ್ ಬಳಕೆ, ಉತ್ಪಾದನೆ ಮಾಡಿದ್ರೆ ದಂಡ ಹಾಕಲಾಗುತ್ತದೆ.
Advertisement