ನವದೆಹಲಿ: ಒಂದು ವರ್ಷ ಪೂರೈಸಿರುವ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಜನರಲ್ಲಿ ಹತಾಶೆ ಭಾವವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷ ಬುಧವಾರ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಮೋದಿ ಸರ್ಕಾರವನ್ನು ವಿರೋಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಂತರ್ ಮಂತರ್ ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ಪ್ರತಿನಾಕಾರರನ್ನು ಉದ್ದೇಶಿಸಿ ಮಾತನಾಡಿರುವ ಆಪ್ ಪಕ್ಷದ ಸಂಚಾಲಕ ದಿಲೀಪ್ ಪಾಂಡೆ ಅವರು, ಮೇಲ್ನೋಟಕ್ಕಷ್ಟೇ ಎಲ್ಲವೂ ಸರಿಯಿದೆ ಎಂಬ ರೀತಿಯಲ್ಲಿ ಬಿಜೆಪಿ ನಾಟಕವಾಡುತ್ತಿದೆ. ಬಿಜೆಪಿ ತನ್ನ ಪಕ್ಷದ ಬೆಂಬಲಿಗರನ್ನೇ ಸಂತೋಷವಾಗಿಟ್ಟುಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಮಥುರಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಪ್ರಥಾನಮಂತ್ರಿ ನರೇಂದ್ರ ಮೋದಿ ಅವರು ಕನಿಷ್ಠ ಪಕ್ಷ ತಮ್ಮ ಬೆಂಬಲಿಗರಿಗಾದರೂ (ಅಚ್ಚೆ ದಿನ್) ಒಳ್ಳೆಯ ದಿನಗಳು ಬಂದಿದೆಯೇ ಎಂದು ಕೇಳಿಲ್ಲ. ಅವರಿಗೆ ಗೊತ್ತಿದೆ ಒಳ್ಳೆಯ ದಿನಗಳು ಇನ್ನೂ ಜನ ಸಾಮಾನ್ಯ ಬಂದಿಲ್ಲ ಎಂಬುದು. ಹಾಗಾಗಿಯೇ ಅವರು ಈ ಪ್ರಶ್ನೆಯನ್ನು ಎಲ್ಲಿಯೂ ಕೇಳಿಲ್ಲ ಎಂದಿದ್ದಾರೆ. ಇದೇ ವೇಳೆ ಮೋದಿ ವಿದೇಶ ಪ್ರವಾಸ ಕುರಿತಂತೆ ವ್ಯಂಗ್ಯವಾಡಿರುವ ಅವರು, ದೇಶಕ್ಕೆ ಹೆಸರಿಗೆ ಮಾತ್ರ ಪ್ರಧಾನಮಂತ್ರಿ ಇದ್ದಾರೆ. ಆದರೆ, ಯಾವಾಗಲು ಫ್ಲೈಟ್ ಮೋಡ್ ನಲ್ಲಿರುತ್ತಾರಷ್ಟೇ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಜನರನ್ನು ತಲುಪಲು ವಿಫಲವಾಗಿದ್ದು, ಎಲ್ಲಾ ರೀತಿಯಲ್ಲು ಸೋಲು ಕಂಡಿದೆ. ಅಧಿಕಾರಕ್ಕೆ ಬರುವಾಗ ಕೊಟ್ಟ ಭರವಸೆಗಳಲ್ಲಿ ಕೇವಲ ಒಂದು ಭರವಸೆಯನ್ನಾದರೂ ಸರ್ಕಾರ ಪೂರ್ಣಗೊಳಿಸಿಲ್ಲ. ಇದೀಗ ಜನರು ಪ್ರಧಾನಮಂತ್ರಿ ಹಾಗೂ ಸಚಿವರು ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಕಪಿಲ್ ಮಿಶ್ರಾ ಹೇಳಿದ್ದಾರೆ.
Advertisement