ಮಾನಸಿಕ ಅಸ್ವಸ್ಥ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ..!
ಭುವನೇಶ್ವರ್: ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದ ಮಗನನ್ನು ಸ್ವಂತ ತಂದೆಯೇ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಒಡಿಶಾ ರಾಜ್ಯದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗನನ್ನು ನೋಡಿಕೊಳ್ಳಲಾಗದೇ ಸ್ವಂತ ತಂದೆಯೇ ಹಗ್ಗದಿಂದ ಮಗನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನು ಕೂಡ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಕಾರಿ ಉದ್ಯೋಗಿಯಾಗಿದ್ದ ಶಕ್ತಿ ಪ್ರಸಾದ್ ಆಚಾರ್ಯ ಎಂಬ ವ್ಯಕ್ತಿ ಇತ್ತೀಚೆಗಷ್ಟೇ ಸ್ವಯಂ ಪ್ರೇರಿತ ನಿವೃತ್ತಿ ಪಡೆದಿದ್ದರು. ಇವರ ಈ ದಿಢೀರ್ ನಿರ್ಧಾರಕ್ಕೆ ಕಾರಣ ಎಂದರೆ ಮಾನಸಿಕ ಅಸ್ವಸ್ಥನಾಗಿದ್ದ 32 ವರ್ಷದ ಮಗ. ತಾವು ಕೆಲಸಕ್ಕೆ ಬಂದರೆ ತಮ್ಮ ಮಗನನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಶಕ್ತಿ ಪ್ರಸಾದ್ ಆಚಾರ್ಯ ಅವರು ತಮ್ಮ ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದರು.
ಆದರೆ ಶನಿವಾರ ಮುಂಜಾನೆ ಶಕ್ತಿ ಪ್ರಸಾದ್ ಆಚಾರ್ಯ ಅವರು ಕೋಣೆಯಲ್ಲಿ ಮಲಗಿದ್ದ ತಮ್ಮ ಮಗನ ಕುತ್ತಿಗೆಗೆ ಹಗ್ಗ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾವೂ ಕೂಡ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತನ್ನ ಮಗನ ಮಾನಸಿಕ ಪರಿಸ್ಥಿತಿ ಒತ್ತಡವನ್ನು ತಡೆಯಲಾಗದೇ ಅತನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಕ್ತಿ ಪ್ರಸಾದ್ ಅವರು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ