ಬಿಹಾರದ ಮಹಾಮೈತ್ರಿಕೂಟ ಉಗ್ರರಿಗೆ ಆಶ್ರಯ ನೀಡುವ ನಾಯಕರನ್ನು ಹೊಂದಿದೆ: ಮೋದಿ

ಮಹಾಮೈತ್ರಿಕೂಟದಲ್ಲಿರುವ ನಾಯಕರು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಆಟವಾಡುತ್ತಿದ್ದು, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವವರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ದರ್ಭಾಂಗ: ಬಿಹಾರದ ಮಹಾಮೈತ್ರಿಕೂಟದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಹಾಮೈತ್ರಿಕೂಟದಲ್ಲಿರುವ ನಾಯಕರು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಆಟವಾಡುತ್ತಿದ್ದು, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವವರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ತಮ್ಮ ಕೊನೆಯ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದು ಮೀಸಲಾತಿ ಬಗ್ಗೆ ಸುಳ್ಳು ಹೇಳಿರುವುದು ಬಿಹಾರ ಚುನಾವಣೆಗೆ ಜಾತಿ ಬಣ್ಣ ನೀಡಲು ಯತ್ನಿಸಿದ ನಿತೀಶ್ ಕುಮಾರ್ ಹಾಗೂ ಮೈತ್ರಿಕೂಟದ ನಾಯಕರ ಬಣ್ಣ ಬಯಲು ಮಾಡಿದೆ ಎಂದಿದ್ದಾರೆ.
ಪುಣೆ ಹಾಗೂ ಮುಂಬೈ ನಲ್ಲಿ ನಡೆದ ಬಾಂಬ್ ಪ್ರಕರಣ ನಡೆದ ಸಂದರ್ಭದಲ್ಲಿ ದರ್ಭಾಂಗ ಘಟಕದ ಭಯೋತ್ಪಾದನೆ ಬಗ್ಗೆ ದಲಿತ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದರು, ಪ್ರಕರಣಕ್ಕೂ ಅಧಿಕಾರದಲ್ಲಿರುವವರಿಗೂ ಸಂಬಂಧವಿರುವುದು ತಿಳಿದ ಅಧಿಕಾರಿ ಕಠಿಣ ಕ್ರಮ ಕೈಗೊಳ್ಳಲು ಮುಂದಾದರು, ಆದರೆ ಅವರನ್ನು ಬಿಹಾರದಿಂದಲೇ ಹೊರಕಳಿಸಲಾಯಿತು ಎಂದು ಮೋದಿ ಆರೋಪಿಸಿದ್ದಾರೆ.
ಭಯೋತ್ಪಾದನೆಯನ್ನು ಉತ್ತೇಜಿಸಿ ರಾಷ್ತ್ರೀಯ ಭದ್ರತೆಯೊಂದಿಗೆ ಆಟವಾಡುವವರು ಬಿಹಾರವನ್ನು ಆಳಬೇಕೆಂದು ಬಯಸುತ್ತೀರಾ? ಬಿಹಾರದ ನೆಲದಲ್ಲಿ ಭಯೋತ್ಪಾದನೆ ನೆಲೆಯೂರಲು ಬಿಡುತ್ತೀರಾ? ಎಂದು ಮೋದಿ ಬಿಹಾರದ ಜನತೆಯನ್ನು ಪ್ರಶ್ನಿಸಿದ್ದಾರೆ. 
ಮಹಾಮೈತ್ರಿಕೂಟದ ನಾಯಕರು ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ತಾವು ಬಿಹಾರದ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಕಾಂಗ್ರೆಸ್, ಆರ್ ಜೆ ಡಿ, ಜೆಡಿಯು ನಾಯಕರು ನಟನೆ ಮಾಡುತ್ತಾ ವಿಧಾನಸಭಾ ಚುನಾವಣೆಗೆ ಜಾತಿಯ ಬಣ್ಣ ನೀಡಲು ಯತ್ನಿಸುತ್ತಿದ್ದರು ಎಂದು ಮೋದಿ ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com