ಶಿಲ್ಲಾಂಗ್: ಗಾರೋ ಹಿಲ್ಸ್ ನ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದರಿಂದ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ(ಎಎಫ್ಎಸ್ ಪಿಎ)ಯನ್ನು ಜಾರಿಗೊಳಿಸುವ ಆಯ್ಕೆಯನ್ನು ಪರಿಗಣಿಸುವಂತೆ ಮೇಘಾಲಯ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಗಾರೋ ಹಿಲ್ಸ್ ಇರುವ ಜಿಲ್ಲೆಯಲ್ಲಿ ಗಾರೋ ನ್ಯಾಷನಲ್ ಲಿಬರೇಶನ್ ಆರ್ಮಿ ಉಗ್ರರ ಬಂಡಾಯ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೇ ಗುಪ್ತಚರ ಇಲಾಖೆ ಅಧಿಕಾರಿ ಬಿಕಾಸ್ ಕುಮಾರ್ ಸಿಂಗ್ ಹಾಗೂ ಓರ್ವ ಉದ್ಯಮಿಯನ್ನು ಹತ್ಯೆ ಮಾಡಿದ್ದರು. ಅಲ್ಲದೇ ಓರ್ವ ಸರ್ಕಾರಿ ಅಧಿಕಾರಿಯನ್ನು ಅಪಹರಣ ಮಾಡಿದ್ದರು. ಉಗ್ರರ ಉಪಟಳ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೊಳಿಸಿ ಅರೆಸೇನಾಪಡೆ ನಿಯೋಜಿಸುವ ಆಯ್ಕೆಯನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಗೆ ಈ ಬಗ್ಗೆ ಸಲಹೆ ನೀಡಿರುವ ಮೇಘಾಲಯದ ಮುಖ್ಯ ನ್ಯಾ.ಉಮಾನಾಥ್ ಸಿಂಗ್, ನ್ಯಾ.ಟಿ.ಎನ್.ಕೆ ಸಿಂಗ್ ಹಾಗೂ ನ್ಯಾ.ಎಸ್.ಆರ್ ಸೇನ್ ಹೈಕೋರ್ಟ್ ಆದೇಶವನ್ನು ಬಗ್ಗೆ ಪ್ರಧಾನಿ ಗಮನಕ್ಕೆ ತರಬೇಕೆಂದು ಹೇಳಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಲಹೆಯನ್ನು ಹೊರತುಪಡಿಸಿ ನಮ್ಮ ಮುಂದೆ ಬೇರೆ ಯಾವುದೇ ಆಯ್ಕೆಗಳಿಲ್ಲ. ಸಾರ್ವಜನಿಕ ಜೀವನ ಸಾಮಾನ್ಯ ಹಂತಕ್ಕೆ ಬರುವವರೆಗೂ ಪೊಲೀಸ್ ಅಧಿಕಾರಿಗಳಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Advertisement