ಹುಡುಗ, ಹುಡುಗಿಯರು ಒಂದೇ ಬೆಂಚಿನಲ್ಲಿ ಕೂರಬಾರದು: ಕೇರಳ ಶಿಕ್ಷಣ ಸಚಿವರು

ನನಗೆ ವೈಯಕ್ತಿಕವಾಗಿ ಮತ್ತು ಶಿಕ್ಷಣ ಸಚಿ ವನಾಗಿ ಕಾಲೇಜುಗಳಲ್ಲಿ ಹುಡುಗ-ಹುಡುಗಿಯರು ತರಗತಿಗಳಲ್ಲಿ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕೂರುವುದು ಇಷ್ಟವಿಲ್ಲ, ಇದು ಕೇರಳ ಸರ್ಕಾರದ...
ಕೇರಳ ಶಿಕ್ಷಣ ಸಚಿವ ಪಿ.ಕೆ.ಅಬ್ದು ರಬ್ಬಾ
ಕೇರಳ ಶಿಕ್ಷಣ ಸಚಿವ ಪಿ.ಕೆ.ಅಬ್ದು ರಬ್ಬಾ

ತಿರುವನಂತಪುರ: ನನಗೆ ವೈಯಕ್ತಿಕವಾಗಿ ಮತ್ತು ಶಿಕ್ಷಣ ಸಚಿ ವನಾಗಿ ಕಾಲೇಜುಗಳಲ್ಲಿ ಹುಡುಗ-ಹುಡುಗಿಯರು ತರಗತಿಗಳಲ್ಲಿ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕೂರುವುದು ಇಷ್ಟವಿಲ್ಲ, ಇದು ಕೇರಳ ಸರ್ಕಾರದ ಶಿಕ್ಷಣ ಸಚಿವ ಪಿ.ಕೆ.ಅಬ್ದು ರಬ್ಬಾ ಹೇಳಿರುವ ಮಾತು. ಆದರೂ ಕಾಲೇಜು ತರಗತಿಗಳಲ್ಲಿ ಹುಡುಗ - ಹುಡುಗಿಯರು ಪ್ರತ್ಯೇಕ ಕುರ್ಚಿಗಳಲ್ಲಿ ಹತ್ತಿರ ಹತ್ತಿರ ಕುಳಿತುಕೊಳ್ಳುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಫಾರೂಕ್‌ ಕಾಲೇಜಿನಲ್ಲಿ ಹುಡುಗನೊಬ್ಬ ಹುಡುಗಿಯರ ಜೊತೆ ಒಂದೇ ಬೆಂಚಿನಲ್ಲಿ ಕುಳಿತುಕೊಂಡದ್ದಕ್ಕೆ ಕಾಲೇಜಿನಿಂದ ಹೊರಹಾಕಿ ವಿವಾದವುಂಟಾಗಿತ್ತು. ಹುಡುಗ - ಹುಡುಗಿಯರು ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುವುದನ್ನು ಕಾಲೇಜಿನ ಆಡಳಿತ ವರ್ಗ ಆಕ್ಷೇಪಿಸಿತ್ತು. ಇದನ್ನು ಪ್ರತಿಭಟಿಸಿದ್ದ ವಿದ್ಯಾರ್ಥಿಯೊಬ್ಬನನ್ನು ಅಮಾನತು ಮಾಡಲಾಗಿತ್ತು. ಈ ವಿಷಯವನ್ನು ಸಂತ್ರಸ್ತ ವಿದ್ಯಾರ್ಥಿಯು ಕೋರ್ಟಿಗೆ ಒಯ್ದಿದ್ದ. ಕೇರಳ ಹೈಕೋರ್ಟ್‌ ಈ ವಿಷಯದಲ್ಲಿ ಆ ಸ್ವಾಯತ್ತ ಕಾಲೇಜಿನ ಆಡಳಿತ ಮಂಡಳಿಯ ನಿರ್ಧಾರವನ್ನು ತಡೆಹಿಡಿದಿತ್ತು. ಈ ವಿವಾದಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವಾಗ ಶಿಕ್ಷಣ ಸಚಿವರು ಹೀಗೆ ಹೇಳಿದ್ದಾರೆ.

ಫಾರೂಕ್‌ ಕಾಲೇಜಿನ ಆಡಳಿತ ಮಂಡಳಿಯಿಂದ ಲಿಂಗ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆಯ ಫೇಸ್ ಬುಕ್ ಪುಟದಲ್ಲಿಯೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಆದರೆ ಕಾಲೇಜಿನ ಕ್ರಮ ಸರಿಯೇ ಇದ್ದು ಅವರಿಂದ ಯಾವುದೇ ರೀತಿಯಲ್ಲಿ ಲಿಂಗ ತಾರತಮ್ಯ ಆಗಿಲ್ಲ' ಎಂದು ಸಚಿವ ರಬ್‌ ಹೇಳಿದ್ದಾರೆ.

ಫಾರೂಕ್‌ ಕಾಲೇಜಿನಲ್ಲಿ ಒಂದೇ ಬೆಂಚಿನಲ್ಲಿ ಅಕ್ಕ ಪಕ್ಕ ಕುಳಿತಿದ್ದ ಹುಡುಗಿಯರ ಸಹಿತ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಕ್ಲಾಸಿನಿಂದ ಹೊರಗಟ್ಟಲಾಗಿತ್ತು. ಇವರಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ಸೂಚನೆ ಪ್ರಕಾರ ತಮ್ಮ ಹೆತ್ತವರನ್ನು ಕಾಲೇಜಿಗೆ ಕರೆ ತಂದು ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದರು.ಆದರೆ ದೀನೂ ಕೆ ಎಂಬ ಹೆಸರಿನ ಹುಡುಗ ಮಾತ್ರ ಕಾಲೇಜು ಆಡಳಿತ ಮಂಡಳಿಯ ಆದೇಶವನ್ನು ಧಿಕ್ಕರಿಸಿ ಅಮಾನತುಗೊಂಡಿದ್ದ. ಈ ವಿಷಯದಲ್ಲಿ ಕೋರ್ಟ್‌ ಮೆಟ್ಟಲೇರಿದ್ದ ಆತನ ಅಮಾನತಿಗೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆತ "130 ವಿದ್ಯಾರ್ಥಿಗಳ ತರಗತಿಯಲ್ಲಿ ತಡವಾಗಿ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸೀಟಿರಲಿಲ್ಲ; ಹಾಗಾಗಿ ಮೂವರು ಹುಡುಗಿಯರು ಕುಳಿತಿದ್ದ ಬೆಂಚಿನಲ್ಲಿ ಖಾಲಿ ಇದ್ದ ಜಾಗದಲ್ಲಿ ಆ ಹುಡುಗರು ಹೋಗಿ ಕುಳಿತರು. ಆದರೆ ಹಾಗೆ ಕುಳಿತುಕೊಳ್ಳುವುದಕ್ಕೆ ಬಿಡದ ಶಿಕ್ಷಕರು "ಪ್ರತ್ಯೇಕವಾಗಿ ಕುಳಿತುಕೊಳ್ಳಿ; ಇಲ್ಲವೇ ಕ್ಲಾಸಿನಿಂದ ಹೊರನಡೆಯಿರಿ' ಎಂದು ಆದೇಶಿಸಿದ್ದರು' ಎಂದು ಹೇಳಿದ್ದ. ಈ ಒಟ್ಟು ಪ್ರಹಸನವು ಕಾಲೇಜಿನಲ್ಲಿ ಭಾರೀ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com