ಹೈದರಾಬಾದ್: ನಾಲ್ಕು ದಿನಗಳ ಹಿಂದೆ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಆರು ಮಂದಿ ನಾಯಕರನ್ನು ಮಾವೋವಾದಿಗಳು ಶನಿವಾರ ಬಿಡುಗಡೆ ಮಾಡಿದ್ದಾರೆ.
ತೆಲಂಗಾಣ ಹತ್ತಿರದ ಪುಸುಗುಪ್ಪ ಅರಣ್ಯ ಪ್ರದೇಶದ ಚಾರ್ಲಾ ಸಮೀಪ ನಾಯಕರನ್ನು ಮಾವೋವಾದಿಗಳು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತೆಲಂಗಾಣದ ಭದ್ರಾಚಲಂ ಕ್ಷೇತ್ರದ ಟಿಆರ್ ಎಸ್ ಮುಖಂಡ ಎಂ.ರಾಮಕೃಷ್ಣ ಸೇರಿದಂತೆ ಇತರ ಐವರು ಟಿಆರ್ ಎಸ್ ನಾಯಕರನ್ನು ಮಾವೋವಾದಿಗಳು ಕಳೆದ ಬುಧವಾರ ಅಪಹರಿಸಿದ್ದರು.
ದೂರದ ಗ್ರಾಮಕ್ಕೆ ಯಾರನ್ನೋ ಭೇಟಿಯಾಗಲೆಂದು ತೆರಳಿದ್ದ ಇವರು ಎಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಗುರುವಾರ ಇವರ ಅಪಹರಣದ ವಿಷಯ ಬೆಳಕಿಗೆ ಬಂದಿತು.
ಮಾವೋವಾದಿಗಳು ಹೆಚ್ಚಾಗಿರುವ ಛತ್ತೀಸ್ ಗರ್ ಗಡಿ ಪ್ರದೇಶದಲ್ಲಿ ಈ ಅಪಹರಣ ಆಡಳಿತಾರೂಢ ಪಕ್ಷದಲ್ಲಿ ಆತಂಕವನ್ನುಂಟುಮಾಡಿದೆ. ಅಪಹರಣಕ್ಕೀಡಾದ ಟಿಆರ್ ಎಸ್ ಮುಖಂಡರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.
ಈ ಸಂದರ್ಭದಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡಿರುವ ಮಾವೋವಾದಿ ನಾಯಕರು, ನಕಲಿ ಎನ್ ಕೌಂಟರ್ ಮತ್ತು ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವುದು ಸೇರಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.ಅವರ ಬೇಡಿಕೆಗಳು ಈಡೇರದಿದ್ದರೆ ಟಿಆರ್ ಎಸ್ ನಾಯಕರನ್ನು ಗುರಿಯಾಗಿರಿಸಿಕೊಂಡು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement