ಪಣಜಿ: ಗೋವಾದ ಕ್ಯಾಥೊಲಿಕ್ ಪಾದ್ರಿ ನಿಗೂಢ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿ ಕೈಗೊಂಡಿರುವ ಅಭಿಯಾನವನ್ನು ಮುಂದಿಟ್ಟುಕೊಂಡು, ಸಿವಿಲ್ ಸೊಸೈಟಿ ಕಾರ್ಯಕರ್ತರು ಗೋವಾದ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದಾರೆ.
ಬಿಸ್ಮಾರ್ಕ್ ಡಯಾಸ್ ಸಾವಿನ ಪ್ರಕರಣಕ್ಕೆ ನ್ಯಾಯ ಕೇಳುತ್ತಿರುವ ಕಾರ್ಯಕರ್ತರು, ಗೋವಾದ ತೇಜೋವಧೆ ಮಾಡಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳನ್ನು ಸಹ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ನವೆಂಬರ್.07 ರಂದು ಕ್ಯಾಥೋಲಿಕ್ ಪಾದ್ರಿ ಬಿಸ್ಮಾರ್ಕ್ ಅವರ ಮೃತ ದೇಹ ಮಾಂಡೋವಿ ನದಿಯಲ್ಲಿ ಪತ್ತೆಯಾಗಿತ್ತು. ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಐಎಸ್ಎಲ್ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅಭಿಯಾನ ಕೈಗೊಳ್ಳುವುದರಿಂದ ಅಂತಾರಾಷ್ಟ್ರೀಯ ಸುದ್ದಿಯಾಗಿ ಗೋವಾದ ತೇಜೋವಧೆಗೆ ಕಾರಣವಾಗುತ್ತದೆ ಎಂದು ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದಾರೆ.
ನಿಗೂಢವಾಗಿ ಮೃತಪಟ್ಟಿರುವ ಬಿಸ್ಮಾರ್ಕ್ ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನಸಂದಣಿಯನ್ನು ಸೆಳೆಯಲು ಸೆಕ್ಷನ್ 144 (ಸಿ.ಆರ್.ಪಿ.ಸಿ) ಯನ್ನು ಧಿಕ್ಕರಿಸುವುದು ಎಷ್ಟು ಸರಿ ಎಂದು ಲಕ್ಷ್ಮಿಕಾಂತ್ ಪರ್ಸೇಕರ್ ಪ್ರಶ್ನಿಸಿದ್ದಾರೆ. ಬಿಸ್ಮಾರ್ಕ್ ಅವರ ನಿಗೂಢ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪಣಜಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 100 ಜನರನ್ನು ಬಂಧಿಸಲಾಗಿತ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿರುವ ಪ್ರದೇಶದಿಂದ 100 ಮೀಟರ್ ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆದಿದರ ಹಿನ್ನೆಲೆಯಲ್ಲಿ ಲಕ್ಷ್ಮಿಕಾಂತ್ ಪರ್ಸೇಕರ್ ಪ್ರತಿಕ್ರಿಯೆ ನೀಡಿದ್ದಾರೆ.
Advertisement