ನವದೆಹಲಿ: ಮಹಾತ್ಮ ಗಾಂಧಿ ಹತ್ಯೆಗೆ ಆರ್ಎಸ್ಎಸ್ ಕಾರಣ ಎಂಬ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.
`ಕ್ಷಮೆ ಯಾಚಿಸುವ ಪ್ರಶ್ನೆಯೆೀ ಇಲ್ಲ. ನನ್ನ ಹೇಳಿಕೆ ಪರವಾಗಿ ವಾದಿಸಲು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣದ ವಿಚಾರಣೆಯನ್ನು ಇದುವರೆಗೆ ತಡೆ ಹಿಡಿಯಲಾಗಿತ್ತು. ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸುವುದಾದರೆ ಪ್ರಕರಣ ಕೈಬಿಡಬಹುದು ಎಂದು ಗುರುವಾರ ನ್ಯಾಯಾಲಯ ಸಲಹೆ ಮಾಡಿತು.
ಆದರೆ, ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರ ವಾದಿಸಲು ಸಿದ್ಧರಿದ್ದಾರೆ ಎಂದು ರಾಹುಲ್ ಪರ ವಕೀಲ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷದ ಫೆಬ್ರವರಿಗೆ ಮುಂದೂಡಲಾಯಿತು.