ನವದೆಹಲಿ: ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಪರ ಭಾರತದಲ್ಲಿ ಗೂಢಚರ್ಯೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿರುವ ಪಾಕ್ ರಾಯಭಾರ ಕಚೇರಿ ಅಧಿಕಾರಿಗಳೇ ಗೂಢಚರ್ಯೆ ನಡೆಸುವಂತೆ ಬಿಎಸ್ಎಫ್ ಯೋಧನಿಗೆ ಕುಮ್ಮಕ್ಕು ನೀಡಿದ್ದರು ಎಂಬ ಆಘಾತಕಾರಿ ಅಂಶವನ್ನು ದೆಹಲಿ ಪೊಲೀಸರು ಹೊರಹಾಕಿದ್ದಾರೆ.
ಸೋಮವಾರ ಬಂಧಿತ ಆರೋಪಿ ಅಬ್ದುಲ್ ರಷೀದ್ ನ ಪ್ರಾಥಮಿಕ ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ಅವರು, ಬಂಧಿತ ಅಬ್ದುಲ್ ರಷೀದ್ ನೀಡಿರುವ ಮಾಹಿತಿಯನ್ವಯ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳ ಬೆಂಬಲದಿಂದಾಗಿ ತಾನು ಈ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಅವರು ಹೇಳಿದರು.
"ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಗಡಿಯಲ್ಲಿ ಪಹರೆ ಕಾಯುತ್ತಿರುವ ಭಾರತೀಯ ಸಶಸ್ತ್ರ ಸಜ್ಜಿತ ಯೋಧರ ವಿವರ ಮತ್ತು ಚಲನವಲಗಳನ್ನು ನೀಡುವಂತೆ ತನ್ನನ್ನು ಕೇಳಿದ್ದರು. ಈ ಕೆಲಸಕ್ಕೆ ಪಾಕಿಸ್ತಾನ ರಾಯಭಾರ ಅಧಿಕಾರಿಗಳು ಭಾರಿ ಮೊತ್ತದ ಹಣದ ಆಮಿಷ ಒಡ್ಡಿದ್ದರು. ಆದರೆ ಆಧಿಕಾರಿಗಳು ತನ್ನ ಖಾತೆಗೆ ಸಣ್ಣ ಮೊತ್ತದ ಹಣವನ್ನು ಮಾತ್ರ ನೀಡಿದ್ದರು ಎಂದು ಬಂಧಿತ ಆರೋಪಿ ಮತ್ತು ಮಾಜಿ ಬಿಎಸ್ಎಫ್ ಯೋಧ ಅಬ್ದುಲ್ ರಷೀದ್ ತಿಳಿಸಿದ್ದಾನೆ ಎಂದು ಯಾದವ್ ತಿಳಿಸಿದ್ದಾರೆ.
ಗೂಢಚರ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮತ್ತೆ ಮೂವರನ್ನು ಕೋಲ್ಕತಾದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿತರಾಗಿರುವ ಇಬ್ಬರನ್ನು ಬಿಎಸ್ಎಫ್ (ಗಡಿ ಭದ್ರತಾ ಪಡೆ)ನ ಮುಖ್ಯ ಪೇದೆ ಅಬ್ದುಲ್ ರಷೀದ್ ಮತ್ತು ಪಾಕಿಸ್ತಾನದ ಗುಪ್ತಚರ ನಿಯಂತ್ರಕ ಕಫೈತುಲ್ಲಾ ಖಾನ್ ಅಲಿಯಾಸ್ ಮಾಸ್ಟರ್ ರಾಜಾ ಎಂದು ಎಂದು ತಿಳಿದುಬಂದಿದೆ.
ಕಫೈತುಲ್ಲಾ ಖಾನ್ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನಿವಾಸಿಯಾಗಿದ್ದು, ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಏಜೆಂಟ್ ಆಗಿದ್ದ ತಿಳಿದುಬಂದಿದೆ. ಇದೇ ಜಿಲ್ಲೆಗೆ ರಷೀದ್ ಕೂಡ ಬಿಎಸ್ಎಫ್ ಗುಪ್ತಚರ ಇಲಾಖೆಯ ವತಿಯಿಂದ ವರ್ಗಗೊಂಡಿದ್ದ.
Advertisement