ಜಿಎಸ್ಟಿ ಜಾರಿಗೆ ಸಿದ್ಧತೆ
ಬೆಂಗಳೂರು: ಸತತ 14 ವರ್ಷಗಳಿಂದ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮುಂದಿನ ವರ್ಷದ ಏಪ್ರಿಲ್ನಿಂದ ಜಾರಿಗೊಳ್ಳಲಿದ್ದು, ಸೂಕ್ತ ಬದಲಾವಣೆ ಮತ್ತು ಕಲಿಕೆಗೆ ಸಿಬ್ಬಂದಿ ಸಿದ್ಧರಾಗಬೇಕು ಎಂದು ವಾಣಿಜ್ಯ ತೆರಿಗೆಗಳ ಆಯುಕ್ತ ರಿತ್ವಿಕ್ ಪಾಂಡೆ ಹೇಳಿದರು.
ಜಿಎಸ್ಟಿ ಕುರಿತು ತೆರಿಗೆ ಇಲಾಖೆ ಸಿಬ್ಬಂದಿಗೆ ಶನಿವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳ್ಳಲಿದ್ದು, ತೆರಿಗೆ ವಿಧಿಸುವಿಕೆ ಮತ್ತು ಪರಿಶೀಲನೆ ಸರಳಗೊಳ್ಳಲಿದೆ. ಇದರಿಂದ ನಮ್ಮ ಮೇಲಿನ ಒತ್ತಡ ತಗ್ಗಲಿದ್ದು, ತೆರಿಗೆ ವಂಚನೆ ತಡೆಯೂ ಸಾಧ್ಯ ಎಂದು ಹೇಳಿದರು. ಜನವರಿಯಿಂದ ತರಬೇತಿ ಚುರುಕು: ಹೊಸ ತೆರಿಗೆ ವ್ಯವಸ್ಥೆ ಬಳಸುವ ಕುರಿತು ಜನವರಿಯಿಂದ ತರಬೇತಿ ಕಾರ್ಯಾಗಾರಗಳು ನಡೆಯಲಿದ್ದು, ಸಿದ್ಧತೆಗಳು ಜೋರಾಗಲಿವೆ. ಡಿಸೆಂಬರ್ ಒಳಗೆ ವ್ಯಾಟ್ ನೋಂದಾಯಿತರಿಗೆ ಜಿಎಸ್ಟಿ ಸಂಖ್ಯೆ ನೀಡಲಾಗುವುದು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ತೆರಿಗೆ ಅಧಿಕಾರಿಗಳಾದ ಬಿ.ಟಿ.ಮನೋಹರ್, ಬನ್ನಿಕೊಪ್ಪ, ಬಿ.ವಿ.ಮುರಳಿಕೃಷ್ಣ ಮುಂತಾದವರು ಜಿಎಸ್ಟಿ ಹಿನ್ನೆಲೆ, ಅಳವಡಿಕೆ, ಹೊಸ ವ್ಯವಸ್ಥೆಗೆ ಬದಲಾಗಬೇಕಾದ ಸವಾಲುಗಳ ಕುರಿತು ವಿವರಿಸಿದರು. `ಆದಾಯ ತೆರಿಗೆ 201617' ಪುಸ್ತಕವನ್ನು ಆಯುಕ್ತ ರಿತ್ವಿಕ್ ಪಾಂಡೆ ಲೋಕಾರ್ಪಣೆ ಮಾಡಿದರು.