ಭಾಗಲ್ಪುರ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ರ್ಯಾಲಿಗಳ ಪರ್ವ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಿಹಾರ ರ್ಯಾಲಿಯ ಬೆನ್ನಲ್ಲೇ ಶನಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕಹಾಲ್ಗಾಂವ್ನಲ್ಲಿ ಚೊಚ್ಚಲ ಪ್ರಚಾರ ರ್ಯಾಲಿ ನಡೆಸಿದ್ದಾರೆ.
ಈ ಚುನಾವಣೆ ನಿರ್ಣಾಯಕ: ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಸೋನಿಯಾ, ಮೀಸಲಾತಿ ವಿಚಾರದಲ್ಲಿ ಬಿಜೆಪಿಯು ಆರೆಸ್ಸೆಸ್ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಕೊಂಡಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಕಾಂಗ್ರೆಸ್ ಯಾವತ್ತೂ ಎಸ್ಸಿ, ಎಸ್ಟಿ ಹಾಗೂ ಬಡವರಿಗೆ ಕೋಟಾ ಒದಗಿಸುವ ಸಾಂವಿಧಾನಿಕ ನೀತಿಗೆ ಬದ್ಧವಾಗಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಇದೇ ವೇಳೆ, ಸಮಾಜವನ್ನು ಒಡೆಯುವವರು ಮತ್ತು ಸುಳ್ಳು ಆಶ್ವಾಸನೆಗಳನ್ನು ಕೊಡುವವರನ್ನು ತಿರಸ್ಕರಿಸುವಂತೆ ಬಿಹಾರ ಜನತೆಗೆ ಕರೆ ನೀಡಿದ್ದಾರೆ. ಬಿಹಾಹ ಚುನಾವಣೆಯು ನಿರ್ಣಾಯಕವಾಗಿದ್ದು, ಬಿಹಾರ ಮತ್ತು ದೇಶದ ಭವಿಷ್ಯ ಇಲ್ಲಿಂದಲೇ ನಿರ್ಧಾರವಾಗಲಿದೆ. ದೇಶವು ವಿಭಜನೆಯತ್ತ ಸಾಗಬೇಕೇ, ಸೌಹಾರ್ದದತ್ತ ಸಾಗಬೇಕೇ ಎಂದು ನೀವೇ ನಿರ್ಧರಿಸಬೇಕು ಎಂದಿದ್ದಾರೆ ಸೋನಿಯಾ.
ಎನ್ಡಿಎ ದುಷ್ಟಶಕ್ತಿಗಳ ಕೂಟ
ಮೋದಿ ಅವರ 15 ತಿಂಗಳ ಆಡಳಿತವು ದೇಶಕ್ಕೆ ಅಪಾಯವುಂಟುಮಾಡಿದೆ. ಬೆರಳೆಣಿಕೆಯ ಕಾರ್ಪೊರೇಟ್ಗಳು ಹೊರತುಪಡಿಸಿ ಬೇರಾರಿಗೂ ಪ್ರಯೋಜನವಾಗಿಲ್ಲ. ನೀವೇ ಹೇಳಿ, ಮೋದಿ ಆಡಳಿತಾವಧಿಯಲ್ಲಿ ನಿರುದ್ಯೋಗ ಹೆಚ್ಚಾಗಿಲ್ಲವೇ, ಸರ್ಕಾರ ಮಹಿಳಾ ಕಲ್ಯಾಣ ಯೋಜನೆಗಳ ಅನುದಾನ ಕಡಿತ ಮಾಡಿಲ್ಲವೇ, ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ದರಪಡೆಯುತ್ತಿದ್ದಾರೆಯೇ? ಎನ್ಡಿಎ ಮೈತ್ರಿಕೂಟವು `ಭಾನುಮತಿಯ ಕುಂಭ' (ದುಷ್ಟಶಕ್ತಿಗಳ ಕೂಟ)ವಾಗಿದೆ. ನಿಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ವಿಭಜನೆ ರಾಜಕೀಯ ಮಾಡುವವರನ್ನು, ಸುಳ್ಳು ಆಶ್ವಾಸನೆ ನೀಡುವವರನ್ನು, ಬಿಹಾರದ ಘನತೆಗೆ ಘಾಸಿ ಮಾಡುವವರನ್ನು ಸೋಲಿಸಿ ಎಂದೂ ಕರೆಕೊಟ್ಟಿದ್ದಾರೆ ಸೋನಿಯಾ.
Advertisement