ಮುಂಬಯಿ: ತೀವ್ರ ಆರ್ಥಿಕ ಮುಗ್ಗಟ್ಟಿನಂದ ಮನನೊಂದಿದ್ದ ಬಿಲ್ಡರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬಯಿಯ ಥಾಣೆಯಲ್ಲಿ ನಡೆದಿದೆ.
ಕಾಸ್ಮೋಸ್ ಗ್ರೂಪ್ ನ ಅಧ್ಯಕ್ಷ ಸೂರಜ್ ರಮೇಶ್ ಪಾರ್ಮರ್ (45) ಮೃತ ದುರ್ದೈವಿ. ಹಲವು ದಿನಗಳಿಂದ ತಲೆದೋರಿದ್ದ ಆರ್ಥಿಕ ಸಂಕಷ್ಟದಿಂದ ತೀವ್ರ ಜುಗುಪ್ಸೆ ಗೊಂಡಿದ್ದ ಸೂರಜ್ ತಾವು ಕೈಗೊಂಡಿದ್ದ ಕಟ್ಟಡ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬರಬೇಕಾದ ಹಣ ಬಂದಿರಲಿಲ್ಲ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 15 ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಮಹಾರಾಷ್ಟ್ರ ವಸತಿ ಕೈಗಾರಿಕಾ ಮಂಡಳಿಯ ಅಧ್ಯಕ್ಷರೂ ಆಗಿದ್ದ ಸೂರಜ್ ಪಾರ್ಮರ್ ನಿನ್ನೆ ಮಧ್ಯಾಹ್ನ ತಮ್ಮ ಫ್ಲ್ಯಾಟ್ ಬಳಿ ತೆರಳಿದ್ದರು. ತಾವು ಹೋಗಿದ್ದ ಕಾರಿನ ಚಾಲಕನನ್ನು ಬೇರೆಡೆ ಕಳುಹಿಸಿದ್ದರು. ಜೊತೆಗೆ ಆಫೀಸ್ ಬಾಯ್ ಕರೆದು ಟೀ ತರುವಂತೆ ಹೇಳಿ ಕಳುಹಿಸಿ , ಆತ ವಾಪಸ್ ಬರುವುದರೊಳಗೆ ತಮ್ಮ 32 ಕ್ಯಾಲಿಬರ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ಕಾಸರಡಾವ್ಲಿ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
Advertisement