ಸಸರಾಮ್: ಬಿಹಾರದ ನಾಶಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮತದಾರರನ್ನು ಕೋರಿದ್ದಾರೆ.
ಶುಕ್ರವಾರ ಬಿಹಾರದ ಸಸರಾಮ್ ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಈ ಹಿಂದೆ ಪರಸ್ಪರ ಕಚ್ಚಾಡಿಕೊಂಡಿದ್ದ ಮೂರು ಪಕ್ಷಗಳು ಇದೀಗ ದಿಢೀರನೆ ಒಂದಾಗಿದ್ದು ಏಕೆ..? ಅವರ ಈ ಮೈತ್ರಿ ಜಪದ ಹಿಂದೆ ಕೇವಲ ಅಧಿಕಾರದ ಲಾಲಸೆ ಮಾತ್ರವಿದ್ದು, ಇದನ್ನು ಅವಕಾಶವಾದಿ ರಾಜಕೀಯ ಎಂದು ಹೇಳಬೇಕು. ಕಳೆದ 60 ವರ್ಷಗಳಿಂದ ಅವರ ಬಿಹಾರದಲ್ಲಿ ಅಧಿಕಾರ ನಡೆಸಿ, ರಾಜ್ಯವನ್ನು ನಾಶಪಡಿಸಿದ್ದಾರೆ. ಇದೀಗ ಬಿಹಾರವನ್ನು ಕಟ್ಟುವ ಕೆಲಸವಾಗಬೇಕಿದ್ದು, ಮತದಾರರು ತಮಗೆ ಅನ್ಯಾಯ ಮಾಡಿದವರಿಗೆ ಚುನಾವಣೆಯಲ್ಲಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ ಪ್ರಧಾನಿ, ಲಾಲು ಜೀ ಅವರನ್ನು ನೀವೇ ಕೇಳಿ ಅವರೇಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು. ಲಾಲು ಪ್ರಸಾದ್ ಅವರು ಬಿಹಾರವನ್ನು ಅಧಿಕಾರದಿಂದ ದೂರದಲ್ಲಿದ್ದುಕೊಂಡೇ ನಿಯಂತ್ರಿಸಲು ಹೊರಟಿದ್ದಾರೆ. ಅವರಿಗೆ ಅವರೇ ಬಿಗ್ ಬಾಸ್ ಎಂದು ಕೊಂಡಿದ್ದಾರೆ. ಆದರೆ ಅವರಿಗೆ ಬಿಹಾರದ ಪ್ರಜ್ಞಾವಂತ ಮತದಾರರು ಬುದ್ದಿಕಲಿಸಲಿದ್ದಾರೆ ಎಂದು ಮೋದಿ ಹೇಳಿದರು.
ಇನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಅವರು, ನಿತೀಶ್ ಕುಮಾರ್ ಅವರ ಅಹಂಕಾರವೇ ಅವರಿಗೆ ದುಬಾರಿಯಾಗಲಿದೆ ಎಂದು ಹೇಳಿದರು. ಇದೇ ಸೋಮವಾರ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಔರಂಗಾಬಾದ್ ನಲ್ಲಿ ಮತ್ತೊಂದು ರ್ಯಾಲಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
Advertisement