2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳ ವಿರುದ್ಧ ಸಿಬಿಐ ತಪ್ಪು ಆಪಾದನೆ ಹೊರಿಸಿದೆ: ನ್ಯಾಯಾಲಯ
ನವದೆಹಲಿ: 2002ರ ಹೆಚ್ಚುವರಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ವಿಶೇಷ ನ್ಯಾಯಾಲಯವು ಮಾಜಿ ಉನ್ನತಾಧಿಕಾರಿ ಮತ್ತು ಇತರ ಮೂರು ಟೆಲಿಕಾಂ ಸಂಸ್ಥೆಗಳನ್ನು ಆರೋಪಮುಕ್ತಗೊಳಿಸಿದೆ. ಸಿಬಿಐಯು ಇವರ ವಿರುದ್ಧ "ತಪ್ಪು ಹಾಗೂ ಕೃತ್ರಿಮ" ದೋಷಾರೋಪ ಸಲ್ಲಿಸಿದೆ ಎಂದು ನ್ಯಾಯಾಲಯ ಹೇಳಿದೆ. ಇದರಿಂದ ಸಿಬಿಐಗೆ ಭಾರೀ ಮುಖಭಂಗವಾಗಿದೆ.
ಟೆಲಿಕಾಂ ಸಂಸ್ಥೆಯ ಮಾಜಿ ಕಾರ್ಯದರ್ಶಿ ಶ್ಯಾಮಲ್ ಘೋಷ್ ಮತ್ತು ಇತರ ಮೂರು ಸಂಸ್ಥೆಗಳಾದ ಹಚಿಸನ್ ಮ್ಯಾಕ್ಸ್ ಲಿಮಿಟೆಡ್, ಸ್ಟೆರ್ಲಿಂಗ್ ಸೆಲ್ಯುಲ್ಲರ್ ಲಿಮಿಟೆಡ್ ಮತ್ತು ಭಾರ್ತಿ ಸೆಲ್ಯುಲ್ಲರ್ ಲಿಮಿಟೆಡ್ ವಿರುದ್ಧ ದೂರಸಂಪರ್ಕ ಪ್ರಾಧಿಕಾರದ ಖಜಾನೆಗೆ 846.44 ಕೋಟಿ ರೂಪಾಯಿ ನಷ್ಟವನ್ನುಂಟುಮಾಡಿದ್ದಾರೆ ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಧೀಶ ಒಪಿ ಸೈನಿ, ಸಿಬಿಐ ನ್ಯಾಯಾಲಯವನ್ನು ತಪ್ಪುದಾರಿಗಿಳಿಯಲು ಪ್ರಯತ್ನಿಸುತ್ತಿದೆ. ಮತ್ತು ಅದು ಸಲ್ಲಿಸಿರುವ ಆರೋಪಪಟ್ಟಿಯು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ. ತಪ್ಪಿತಸ್ಥ ಅಧಿಕಾರಿಗಳಿದ್ದರೆ ತನಿಖೆ ನಡೆಸಿ ಎಂದು ಸಿಬಿಐ ನಿರ್ದೇಶಕರಿಗೆ ನ್ಯಾಯಾಲಯ ಹೇಳಿದೆ.
ಆದೇಶದ ಕೊನೆಯ ಪುಟವನ್ನು ನಾನು ಓದಿದ್ದೇನೆ. ಇದು ತಪ್ಪು ಮತ್ತು ಕೃತ್ರಿಮ ಆರೋಪಪಟ್ಟಿಯಾಗಿದ್ದು, ಆರೋಪಿಗಳ ವಿರುದ್ಧ ಬಲವಾದ ಸಾಕ್ಷಿಗಳಿಲ್ಲದ ಕಾರಣ ಎಲ್ಲರನ್ನೂ ಖುಲಾಸೆಗೊಳಿಸಲಾಗುವುದು. ಆರೋಪಪಟ್ಟಿಯಲ್ಲಿ ಎಲ್ಲಾ ಅಂಶಗಳು ಸತ್ಯಕ್ಕೆ ದೂರವಾಗಿದ್ದು, ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಯತ್ನಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.