ಬಾಲಸೋರ್: ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಸ್ವದೇಶಿ ನಿರ್ಮಿತ ಕ್ಷಿಪಣಿ ನಿರ್ಭಯ್ ನ ಪ್ರಯೋಗಾತ್ಮಕ ಉಡಾವಣೆ ವಿಫಲವಾಗಿದ್ದು, ನಿರ್ಧಿಷ್ಟ ಗುರಿ ತಲುಪುವಲ್ಲಿ ಕ್ಷಿಪಣಿ ವಿಫಲವಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಿರ್ಭಯ್ ಕ್ಷಿಪಣಿ ಇಂದು ಬೆಳಗ್ಗೆ 9.30ಕ್ಕೆ ಹಾರಿಸಬೇಕಿತ್ತು. ಆದರೆ ಉಡಾವಣೆಗೊಳ್ಳುವ ಕೊನೆಯ 3 ನಿಮಿಷದ ಸಂದರ್ಭದಲ್ಲಿ ಕ್ಷಿಪಣಿಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಪ್ರಯೋಗವನ್ನು ಮುಂದೂಡಲಾಗಿತ್ತು. ಬಳಿಕ ಬೆಳಗ್ಗೆ 11.38ರಲ್ಲಿ ಉಡಾವಣೆಗೆ ಸಮಯ ನಿಗದಿ ಪಡಿಸಲಾಯಿತು. ಬಳಿಕ ನಡೆದ ಪ್ರಯೋಗಾತ್ಮಕ ಉಡಾವಣೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿಯೇ ಉಡಾವಣೆಯಾಯಿತಾದರೂ, ನಿರ್ಧಿಷ್ಟ ಸಮಯದಲ್ಲಿ ನಿಖರ ಗುರಿಯನ್ನು ತಲುಪುವುದರಲ್ಲಿ ವಿಫಲವಾಗಿದೆ ಎಂದು ತಿಳಿದುಬಂದಿದೆ. ಒಡಿಶಾದ ಬಾಲೋಸೋರ್ ನ ಚಾಂಡಿಪುರ್ ನಿಂದ ನಿರ್ಭಯ್ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು, ಕ್ಷಿಪಣಿ ಉಡಾವಣೆಗೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಉಡಾವಣಾ ವಾಹಕದಿಂದ ಕ್ಷಿಪಣಿಯನ್ನು ಉಡಾಯಿಸಲಾಗಿತ್ತು.
ನಿರ್ಭಯ್ ಗೆ ಇದು ಮೂರನೇ ಪ್ರಯೋಗವಾಗಿದ್ದು, ಈ ಹಿಂದೆ 2013 ಮಾರ್ಚ್ 12ರಂದು ಪರೀಕ್ಷೆ ನಡೆಸಲಾದ ಪರೀಕ್ಷೆಯಲ್ಲಿ ಕ್ಷಿಪಣಿ ನಿರ್ಧಿಷ್ಟ ಗುರಿ ತಲುಪುವಲ್ಲಿ ವಿಫಲವಾಗಿತ್ತು. ಮತ್ತೆ ಕ್ಷಿಪಣಿಗೆ ಸುಧಾರಿತ ತಂತ್ರಜ್ಞಾನ ಅಳವಡಿಸಿ 2014 ಅಕ್ಟೋಬರ್ 17ರಂದು ಪ್ರಯೋಗಾತ್ಮಕ ಉಡಾವಣೆ ಮಾಡಲಾಗಿತ್ತು. ಈ ಉಡಾವಣೆಯಲ್ಲಿ ನಿರ್ಭಯ್ ಕ್ಷಿಪಣಿ ನಿರ್ಧಿಷ್ಟ ಸಮಯದಲ್ಲಿ ನಿಖರ ಗುರಿಯನ್ನು ತಲುಪುವ ಮೂಲಕ ಯಶಸ್ವಿಯಾಗಿತ್ತು.
Advertisement