ನವದೆಹಲಿ: ಗೋಮಾಂಸ ಸೇವನೆ ಶಂಕಯಿಂದಾಗಿ ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿ ಹತ್ಯೆಯಾದದ್ದು ನಿಜಕ್ಕೂ ಅವಮಾನಕರ ಘಟನೆ. ಇದೊಂದು ಖಂಡನಾರ್ಹ ಘಟನೆಯಾಗಿದೆ. ದಾದ್ರಿಯಲ್ಲಿ ನಡೆದ ಘಟನೆಯ ಬಳಿಕ ನಡೆದ ಎಲ್ಲಾ ಬೆಳವಣಿಗಳು ಎಲ್ಲರಿಗಿಂತಲೂ ಹೆಚ್ಚು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹೆಚ್ಚು ಹಾನಿಯುಂಟು ಮಾಡಿದೆ ಎಂದು ಎನ್ ಡಿಎಯ ಮೈತ್ರಿ ಪಕ್ಷ ಶಿರೋಮಣಿ ಅಖಾಲಿ ದಳ ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಅಖಾಲಿ ದಳದ ಸಂಸದ ನರೇಶ್ ಗುಜರಾಲ್ ಅವರು, ದಾದ್ರಿಯಲ್ಲಿ ನಡೆದ ಘಟನೆ ನಿಜಕ್ಕೂ ಅವಮಾನಕರ ಘಟನೆಯಾಗಿದ್ದು, ಘಟನೆಯಿಂದ ಇಡೀ ದೇಶವೇ ತಲೆತಗ್ಗಿಸುವ ಸಂದರ್ಭ ಎದುರಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯು ಎನ್ ಡಿಎ ಸರ್ಕಾರ ಹಾಗೂ ಬಿಜೆಪಿ ಪಕ್ಷದ ವರ್ಚಸ್ಸು ಹಾಳಾಗುವಂತೆ ಮಾಡಿದೆ. ಘಟನೆ ನಂತರದ ಬೆಳೆವಣಿಗೆಗಳು ಇದೀಗ ಇತರರಿಗಿಂತಲೂ ಪ್ರಧಾನಿಯವರಿಗೆ ಹೆಚ್ಚು ಹಾನಿಯುಂಟು ಮಾಡಿದೆ ಎಂದು ಹೇಳಿದ್ದಾರೆ.
ಕೆಲವು ನಾಯಕರು ಉನ್ನತ ಸ್ಥಾನದಲ್ಲಿದ್ದರೂ ಸಹ ಜವಾಬ್ದಾರಿಯನ್ನು ಮರೆತು ಬೇಜಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದೆ. ಇದರಲ್ಲಿ ಸಂಘ ಪರಿವಾರದ ನಾಯಕರು ಹೊರತಾಗಿಲ್ಲ. ವಿಷಾದಕರ ಸಂಗತಿಯೆಂದರೆ ಘಟನೆ ನಡೆದು ಇಷ್ಟು ದಿನ ಕಳೆದರೂ ಈ ವರೆಗೂ ಯಾರೊಬ್ಬರ ಮೇಲೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಾಗ ಮಾತ್ರ ಧರ್ಮಾಂಧರಿಗೆ ಕಟು ಸಂದೇಶ ರವಾನೆಯಾಗುವುದು ಎಂದು ಅವರು ಹೇಳಿದ್ದಾರೆ.
Advertisement