ಅಕಾಡೆಮಿಯ ಮೌನ ಮುಂದುವರೆದರೆ, ಪ್ರಶಸ್ತಿ ಹಿಂದಿರುಗಿಸುವೆ: ಸೇಥ್
ನವದೆಹಲಿ: ಸಾಹಿತ್ಯ ಅಕಾಡೆಮಿಯು ಇನ್ನೂ ಬಾಯಿ ತೆರೆಯದಿದ್ದರೆ, ನಾನೂ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ." ಇದು ಖ್ಯಾತ ಕಾದಂಬರಿಕಾರ ಮತ್ತು ಕವಿ ವಿಕ್ರಂ ಸೇಥ್ ಅವರ ನಿಷ್ಠುರ ನುಡಿ.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹಾಗೂ ಲೇಖಕರು, ಚಿಂತಕರ ರಕ್ಷಣೆ ಬಗ್ಗೆ ಅಕಾಡೆಮಿ ಬಾಯಿ ಮುಚ್ಚಿ ಕುಳಿತುಕೊಳ್ಳುವುದನ್ನು ಮುಂದುವರಿಸಿದರೆ, ಪ್ರಶಸ್ತಿ ವಾಪಸ್ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ ಸೇಥ್. ಈ ಮೂಲಕ ಭಾರತದಾದ್ಯಂತ ನಡೆಯುತ್ತಿರುವ ಸಾಹಿತಿಗಳ ಸೆಡವಿಗೆ ಮತ್ತೊಬ್ಬ ಹೈಪ್ರೊ-ಲ್ ಲೇಖಕ ಸೇರ್ಪಡೆ ಗೊಳ್ಳುವ ಸುಳಿವು ಸಿಕ್ಕಿದೆ. ಎನ್ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೇಥ್, “ನನಗೆ ಪ್ರಶಸ್ತಿಯ ಬಗ್ಗೆ ಆಸೆಯೇನೂ ಇಲ್ಲ. ಆದರೆ, ಸಾಹಿತ್ಯ ಅಕಾಡೆಮಿಯ ಮೌನ ಮಾತ್ರ ಅಚ್ಚರಿಯದ್ದು. ಯಾರ್ಯಾರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೋ, ಅವರನ್ನೆಲ್ಲ ನಾನು ಶ್ಲಾಘಿಸುತ್ತೇನೆ. ಇಂತಹ ನಿರ್ಧಾರ ಕೈಗೊಳ್ಳಲು ಧೈರ್ಯ ಬೇಕು" ಎಂದರು.
ಇದೇ ವೇಳೆ, “ನೀವೂ ಪ್ರಶಸ್ತಿ ಹಿಂದಿರುಗಿಸುತ್ತೀರಾ" ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೇಖಕ ಸೇಥ್, “ಅಕಾಡೆಮಿಯ ಮುಂದಿನ ಸಭೆಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ನೋಡುತ್ತೇನೆ. ಅಕಾಡೆಮಿಯು ತನ್ನ ಮೌನ ವನ್ನು ಮುಂದುವರಿಸಿದರೆ, ನಾನೂ ಪ್ರಶಸ್ತಿ ವಾಪಸ್ ನೀಡುತ್ತೇನೆ" ಎಂದು ನುಡಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ