ನನ್ನನ್ನು ನಿಂದಿಸಿ ಆಯಾಸವಾದ ನಿತೀಶ್ ಈಗ ಬಿಹಾರ ಜನತೆಯನ್ನು ನಿಂದಿಸುತ್ತಿದ್ದಾರೆ: ಮೋದಿ

ಬಿಹಾರ ರಾಜ್ಯವನ್ನು ಹಲವು ವರ್ಷಗಳಿಂದಲೂ ಆಳಿದ ನಾಯಕರಿಗೆ ರಾಜ್ಯದ ಮೇಲೆ ಹಿಡಿತವಿಟ್ಟುಕೊಳ್ಳುವ ಶಕ್ತಿಯಿರುತ್ತದೆ. ಆದರೆ, ಈ ನಾಯಕರು ನನ್ನನ್ನೇಕೆ ನಿಂದಿಸುತ್ತಿದ್ದಾರೆಂಬುದರ ಬಗ್ಗೆ ನಾನು ಯಾವಾಗಲೂ ಚಿಂತಿಸುತ್ತಿರುತ್ತೇನೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಬಿಹಾರ: ನನ್ನನ್ನು ನಿಂದಿಸಿ ಆಯಾಸವಾದ ನಿತೀಶ್ ಕುಮಾರ್ ಅವರು ಇದೀಗ ಬಿಹಾರ ಜನತೆಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಗೋಪಾಲ್ಗಂಜ್ ನಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಮಾತನಾಡುತ್ತಿರುವ ಅವರು, ಬಿಹಾರ ರಾಜ್ಯವನ್ನು ಹಲವು ವರ್ಷಗಳಿಂದಲೂ ಆಳಿದ ನಾಯಕರಿಗೆ ರಾಜ್ಯದ ಮೇಲೆ ಹಿಡಿತವಿಟ್ಟುಕೊಳ್ಳುವ ಶಕ್ತಿಯಿರುತ್ತದೆ. ಆದರೆ, ಈ ನಾಯಕರು ನನ್ನನ್ನೇಕೆ ನಿಂದಿಸುತ್ತಿದ್ದಾರೆಂಬುದರ ಬಗ್ಗೆ ನಾನು ಯಾವಾಗಲೂ ಚಿಂತಿಸುತ್ತಿರುತ್ತೇನೆ. ನಿಂದನೆ ಮಾಡುವ ಜನರು ನನ್ನನ್ನು ಎಷ್ಟು ಬೇಕಾದರೂ ನಿಂದಿಸಿ. ಆದರೆ, ಬಿಹಾರ ಜನತೆಯನ್ನು ನಿಂದಿಸಬೇಡಿ ಎಂದು ಹೇಳಿದ್ದಾರೆ.

ಶ್ರೀಮಾನ್ಯ ನಿತೀಶ್ ಕುಮಾರ್ ಅವರೇ ಪ್ರತೀ ಚುನಾವಣೆಯಲ್ಲಿಯೂ ಸೋಲು-ಗೆಲುವು ಎಂಬುದು ಇದ್ದೇ ಇರುತ್ತದೆ. ಮೋದಿಯನ್ನು ನಿಂದಿಸಿ...ನಿಂದಿಸಿ...ನಿಮಗೆ ಆಯಾಸವಾಗಿದೆಯೆಂಬಂತಿದೆ. ಹಾಗಾಗಿ ಇದೀಗ ಬಿಹಾರವನ್ನು ನಿಂದಿಸಲು ಪ್ರಾರಂಭಿಸಿದ್ದೀರಾ? ನನ್ನನ್ನು ಎಷ್ಟು ಬೇಕಾದರೂ ನಿಂದಿಸಿ. ಆದರೆ, ಬಿಹಾರವನ್ನು ಮಾತ್ರ ನಿಂದಿಸಬೇಡಿ.

ನನ್ನ ರ್ಯಾಲಿಯಲ್ಲಿ ದುಡ್ಡು ಕೊಟ್ಟು ಜನರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಇದು ನಿಮಗೆ ಅವಮಾನ ಮಾಡಿದಂತೆಯಲ್ಲವೇ? ಬಿಹಾರ ಜನತೆ ಇದೀಗ ಕೋಪದಲ್ಲಿದೆ ಇದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಅಭಿವೃದ್ಧಿಯಾಗದಿರುವುದು. ಜಂಗಲ್ ರಾಜ್ ಆಡಳಿತವಿದ್ದ ದಿನಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಇಲ್ಲಿರುವ ಪ್ರದೇಶಗಳನ್ನು ಮಿನಿ ಚಂಬಲ್ ಮಾಡಿದ್ದರು. ಹೀಗಾಗಿ ಇಲ್ಲಿನ ಜನತೆ ಅನಿವಾರ್ಯ ಹಾಗೂ ಇಷ್ಟವಿಲ್ಲದಿದ್ದರೂ ಬಲವಂತದಿಂದಾಗಿ ಗೋಪಾಲ್ಗಂಜ್ ಬಿಟ್ಟು ಬೇರೆಡೆಗೆ ಹೋಗಿದ್ದರು.

ಈ ಹಿಂದೆ ಅಬುಧಾಬಿಗೆ ಭೇಟಿ ನೀಡಿದ್ದಾಗ ಅಲ್ಲಿನ ಕಾರ್ಮಿಕರ ಕಾಲೋನಿಯಲ್ಲಿ ಸಾಕಷ್ಟು ಭಾರತೀಯರನ್ನು ಭೇಟಿ ಮಾಡಿದ್ದೆ. ಭೇಟಿ ಮಾಡಿದ ಬಹುತೇಕ ಜನರು ಬಿಹಾರ ಗೋಪಾಲ್ಗಂಜ್ ಗೆ ಸೇರಿದ್ದವರಾಗಿದ್ದರು. ಇದೀಗ ಬಿಹಾರ ರಾಜ್ಯದ ಮೇಲೆ ನಾವಿಟ್ಟಿರುವ ಧ್ಯೇಯವೊಂದೇ ಬಿಹಾರದ ರಾಜ್ಯದ ವಿಕಾಸ. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಮೊದಲು ಇಲ್ಲಿರುವ ಭ್ರಷ್ಟಾಚಾರವನ್ನು ಸಾಯಿಸುತ್ತೇನೆ. ಇದು ನನ್ನ ಪ್ರಮಾಣ.

ಕೆಲವು ನಾಯಕರು ನನ್ನನ್ನು ನಿಂದಿಸಬಹುದು. ಆದರೆ, ಅವರು ಎಂದಿಗೂ ಭ್ರಷ್ಟಚಾರ ಕುರಿತಂತೆ ನನ್ನ ಮೇಲೆ ಆರೋಪ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಇತ್ತೀಚೆಗಷ್ಟೇ ನಿತೀಶ್ ಕುಮಾರ್ ಅವರ ಪಕ್ಷದ ಸಚಿವರೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ಸಿಕ್ಕಿ ಹಾಕಿಕೊಂಡಿದ್ದದ್ದು ಎಲ್ಲರಿಗೂ ನೆನಪಿರಬಹುದು. ನಿತೀಶ್ ಕುಮಾರ್ ಅವರೇ ಬಿಹಾರ ಜನರನ್ನೇಕೆ ಮೂರ್ಖರನ್ನಾಗಿ ಮಾಡುತ್ತಿದ್ದೀರಿ? ಬಿಹಾರ ರಾಜ್ಯವನ್ನು ಮಾರಾಟ ಮಾಡಲು ಈಗಾಗಲೇ ಕೆಲವು ನಾಯಕರು ಮುಂಗಡ ಹಣವನ್ನು ಪಡೆದಿದ್ದಾರೆ. ನೀವು ರಾಜ್ಯದಲ್ಲಿ ಏನೇನು ಮಾಡುತ್ತಿದ್ದೀರೋ ಎಲ್ಲವೂ ಇಲ್ಲಿನ ಜನತೆಗೆ ಗೊತ್ತಿದೆ.

ಬಿಹಾರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಬಿಹಾರ ಮತ್ತೆ ಚಂಬಲ್ ರಾಜ್ಯವಾಗುವುದು ನಿಮಗೆ ಇಷ್ಟವಿದೆಯೇ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆದರೆ, ಬಿಹಾರವನ್ನು ವಿಕಾಸ ಸರ್ಕಾರವನ್ನಾಗಿ ಮಾಡುತ್ತೇವೆ. ಇಲ್ಲಿನ ಯುವ ಜನತೆಗೆ ಉತ್ತಮ ವಿದ್ಯಾಭ್ಯಾಸವನ್ನು ಕಲ್ಪಿಸಲಾಗುತ್ತದೆ. ಇಲ್ಲಿನ ಸಾಕಷ್ಟು ಯುವಜನತೆ ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ಇಲ್ಲಿನ ಸರ್ಕಾರ ಯುವಜನತೆಗೆ ಉದ್ಯೋಗ ದೊರಕಿಸುವಲ್ಲಿ ವಿಫಲವಾಗಿದೆ.

ರಾಜ್ಯದಲ್ಲಿ ವಿದ್ಯುತ್ ಇಲ್ಲದೇ ಇದ್ದರೆ ಉದ್ಯಮ ಕ್ಷೇತ್ರಗಳು ಬಿಹಾರದಲ್ಲಿ ನೆಲೆಯೂರುವುದು ಹೇಗೆ? ನಮ್ಮ ಸರ್ಕಾರ ನಿಮಗೆ 24 ಗಂಟೆಗಳ ನಿರಂತರ ವಿದ್ಯುತ್ ನೀಡುತ್ತದೆ. ಹಿರಿಯ ನಾಗರೀಕರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ. ನಮ್ಮ ಸರ್ಕಾರ ರಾಜ್ಯದ ವಿಕಾಸದ ಬಗ್ಗೆ ಮಾತನಾಡಿದರೆ, ಅವರು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಬಿಹಾರ ರಾಜ್ಯದ ಜನತೆ ಇದೀಗ ವಿಕಾಸ ಸರ್ಕಾರಕ್ಕೆ ಮತ ಹಾಕುತ್ತಾರೆಂಬುದಾಗಿ ನಮಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com