ನವದೆಹಲಿ: ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಏಕತೆಯ ಮಂತ್ರ ಪಠಿಸಿದ್ದಾರೆ.
ದೆಹಲಿಯ ರಾಜ್ಪಥ್ನಲ್ಲಿ 'ಏಕತೆಗಾಗಿ ಓಟ'ಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಇಂದು ನಾವು ಪಟೇಲ್ ಅವರ 140ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಪಟೇಲ್ ಅವರು ಓರ್ವ ಮಹಾನ್ ವ್ಯಕ್ತಿ, ನವ ಭಾರತದ ಶಿಲ್ಪಿ ಎಂದರು.
ಅತಿ ಕಡಿಮೆ ಸಮಯದಲ್ಲಿ ದೇಶದಲ್ಲಿ ಏಕತೆಯನ್ನು ತಂದ ವ್ಯಕ್ತಿ ಪಟೇಲ್. ಉಕ್ಕಿನ ಮನುಷ್ಯ ಎಂದರೆ ನಮ್ಮ ಕಣ್ಣೆದುರು ಬರುವುದು ಪಟೇಲ್ ಅವರು ಮಾತ್ರ. ಅವರು ದೇಶಕ್ಕೆ ನೀಡಿದ ಕೊಡುಗೆಗಳು ಮರೆಯುವಂಥದಲ್ಲ. ಯಾವ ಕಾಲಕ್ಕೂ ಅವರ ಕೊಡುಗೆಗಳನ್ನು ಮರೆಯಬಾರದು ಎಂದರು.
'ಏಕ್ ಭಾರತ್ ಶ್ರೇಷ್ಠ ಭಾರತ' ಒಂದೇ ಗುರಿಯಾಗಲಿ. ಸರ್ದಾರ್ ಪಟೇಲ್ ಆಶಯಗಳನ್ನು ನಾವು ಪಾಲಿಸೋಣ. ಸರ್ದಾರ್ ಪಟೇಲ್ ಪಟ್ಟ ಶ್ರಮದಿಂದಾಗಿ ನಾವೇಲ್ಲ ಒಂದಾಗಿದ್ದೇವೆ. ಹೀಗಾಗಿ ಏಕತೆಗಾಗಿ ನಾವು ಎಂದಿಗೂ ಶ್ರಮಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ಇದೇ ವೇಳೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ನೆನೆದ ಪ್ರಧಾನಿ ಮೋದಿ, ಇಂದಿರಾ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ಭಾರತ ಎಂದಿಗೂ ಇಂದಿರಾ ಗಾಂಧಿ ಸೇವೆ ಮರೆಯುವುದಿಲ್ಲ ಎಂದರು.
ಇಂದು ಇಂದಿರಾ ಗಾಂಧಿಯವರ ಪುಣ್ಯತಿಥಿ, ನಾವೆಲ್ಲ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Advertisement