ನವದೆಹಲಿ: ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ಹಾಗೂ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ರಾಜಕೀಯ ಪ್ರೇರಿತ ಎಂದು ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನಾಯಮೂರ್ತಿ ಎ.ಪಿ.ಶಾಹ್ ಅವರು ಹೇಳಿದ್ದಾರೆ.
ಸಿಎನ್ಎನ್-ಐಬಿಎನ್ ಸುದ್ದಿವಾಹಿನಿಗೆ ಮಾತನಾಡಿರುವ ಕಾನೂನು ಆಯೋಗದ ಮಾಜಿ ಅಧ್ಯಕ್ಷ, ಅಫ್ಜಲ್ ಗಲ್ಲು ಶಿಕ್ಷೆ ನಿರಾಶೆ ಮೂಡಿಸಿತ್ತು ಎಂದಿದ್ದಾರೆ. ಅಲ್ಲದೆ ಮೆಮನ್ ಕ್ಷಮಧಾನಕ್ಕೆ ಇನ್ನು ಅವಕಾಶ ಇತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೆಮನ್ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಶಾಹ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆಯೇ ಭಿನ್ನಾಭಿಪ್ರಾಯ ಇತ್ತು. ಹೀಗಾಗಿ ಅದನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು ಮತ್ತು ಕ್ಷಮಧಾನ ಅರ್ಜಿ ತಿರಸ್ಕಾರಗೊಂಡ ನಂತರ 14 ದಿನಗಳ ಕಾಲಾವಕಾಶ ನೀಡಬೇಕಿತ್ತು ಎಂದಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಸರ್ಕಾರ ತುಂಬಾ ಆತುರದ ನಿರ್ಧಾರ ತೆಗೆದುಕೊಂಡಿದ್ದು, ಇದು ರಾಜಕೀಯ ಪ್ರೇರಿತ ಎಂದಿರುವ ಶಾಹ್, ಭಯೋತ್ಪಾದನಾ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ಒಂದು ನಿರೋಧಕವಾಗಿ ಬಳಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement