ಗಾಂಧಿನಗರ: ಪಟೇಲ್ ಸಮುದಾಯಕ್ಕೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಆಗಸ್ಟ್ ೨೫ ರಂದು ನಡೆಸಿದ ರ್ಯಾಲಿಯ ವೇಳೆ ಪೊಲೀಸರು ನಡೆಸಿದ ದೌರ್ಜನ್ಯಗಳ ವಿರುದ್ಧ ಕೇಸು ದಾಖಲಿಸುವಂತೆ ಪಾಟಿದಾರ್ ಅನಾನ್ಮತ್ ಅಂದೋಲನ ಸಮಿತಿಯ ಸಂಚಾಲಕ ಹಾರ್ದಿಕ್ ಪಟೇಲ್ ಆಗ್ರಹಿಸಿದ್ದಾರೆ. ಆವರು ಸೋಮವಾರ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಭೇಟಿ ಮಾಡಿದ ನಂತರ ಈ ಹೇಳಿಕೆ ನೀಡಿದ್ದಾರೆ.
"ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಯಾವುದೇ ಆದೇಶಗಳಿಲ್ಲದೆ ನಮ್ಮ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ನಾವು ಇದರ ಬಗ್ಗೆ ಚರ್ಚಿಸಲಿದ್ದೇವೆ. ಪೊಲೀಸರ ವಿರುದ್ಧ ಕೇಸು ದಾಖಲಿಸಬೇಕು." ಎಂದು ಪಟೇಲ್ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.
"ನಮ್ಮ ಜೊತೆ ಹಲವು ವಕೀಲರಿದ್ದಾರೆ. ಬಂಧನದಲ್ಲಿ ಮಕ್ಕಳನ್ನು ಕೆಟ್ಟದಾಗಿ ಥಳಿಸಲಾಗಿದೆ. ನಾವು ಬಸ್ಸುಗಳನ್ನು ಸುಡಲಿಲ್ಲ. ನಮ್ಮನ್ನು ನಮ್ಮ ಮನೆಗಳಿಂದ ಎತ್ತಿಹಾಕೊಕೊಂಡು ಹೋಗಲಾಯಿತು ಮತ್ತು ನಮ್ಮ ವಿರುದ್ಧ ಪ್ರಕಣ ದಾಖಲಿಸಿಕೊಂಡಿದ್ದರು" ಎಂದು ಅವರು ಹೇಳಿದ್ದಾರೆ.
ಕೇಶುಭಾಯಿ ಪಟೇಲ್ ಅವರು ಆಶೀರ್ವಾದ ಮಾಡಿದ್ದು ಅಹಿಂಸಾತ್ಮಕ ಚಳುವಳಿ ಮುಂದುವರೆಸುವಂತೆ ಹೇಳಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ.
ಹಾರ್ದಿಕ್ ಇಂದು ಗುಜರಾತಿನ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರನ್ನು ಭೇಟಿ ಮಾಡಿ ಇದೇ ವಿಷಯವನ್ನು ಚರ್ಚಿಸಲಿದ್ದಾರೆ ಎನ್ನಲಾಗಿದೆ.
Advertisement