ನವದೆಹಲಿ: ಹಣದ ತೊಂದರೆಯಿಂದ ಉನ್ನತ ವಿದ್ಯಾಭ್ಯಾಸ ಪಡೆಯಲು ವಂಚಿತರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ಸಾಲ ಸೌಲಭ್ಯವನ್ನು ಶೀಘ್ರದಲ್ಲೇ ಘೋಷಣೆ ಮಾಡಲಿದೆ. ಬ್ಯಾಂಕ್ನಲ್ಲಿ ಯಾವುದೇ ಜಾಮೀನು ನೀಡದೆ ರು.7.5 ಲಕ್ಷ ಸಾಲ ಪಡೆಯುವ ಪದ್ಧತಿಯಾಗಿದೆ ಇದು. ಈ ಸಾಲಕ್ಕೆ ಶೇ.2 ರಷ್ಟು ಮಾತ್ರ ಬಡ್ಡಿಯನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗುತ್ತದೆ .
ಸಾಲ ಮರುವಾಪತಿ ಮಾಡಲು ವಿದ್ಯಾರ್ಥಿಗಳಿಗೆ 20 ವರ್ಷ ಕಾಲಾವಕಾಶ ನೀಡಲಾಗುತ್ತದೆ. ಶಿಕ್ಷಣ ಮುಗಿಸಿ ಒಂದು ವರ್ಷ ಕಳೆದ ನಂತರ ಅಥವಾ ಕೆಲಸ ಸಿಕ್ಕಿ ಒಂದು ವರ್ಷ ಕಳೆದ ನಂತರ ಸಾಲ ಮರು ಪಾವತಿ ಮಾಡಲು ಆರಂಭಿಸಬಹುದು. ಈಗಿರುವ ವಿದ್ಯಾಭ್ಯಾಸ ಸಾಲಗಳಲ್ಲಿ ಶಿಕ್ಷಣ ಮುಗಿಸಿ 6 ತಿಂಗಳಲ್ಲಿ ಸಾಲ ಮರು ಪಾವತಿ ಮಾಡಲು ತೊಡಗಬೇಕಿದೆ.
ಹೊಸ ಸಾಲ ಪದ್ಧತಿಯಲ್ಲಿ ಸಾಲ ಪಡೆಯುವಾಗ ಜಾಮೀನು ಆಗಿ ಏನೂ ನೀಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳಿಗಾಗಿ ಬ್ಯಾಂಕ್ನಲ್ಲಿ ಜಾಮೀನುದಾರನಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಶಿಕ್ಷಣ ಸಾಲ ಪಡೆಯಬೇಕಾದರೆ, ಸಾಲ ರು. 4 ಲಕ್ಷಕ್ಕಿಂತ ಮೇಲ್ಪಟ್ಟಿದ್ದರೆ ಜಾಮೀನು ನೀಡಿ ಹೆತ್ತವರು ಜಾಮೀನುದಾರರಾಗಿ ನಿಲ್ಲಬೇಕಾಗುತ್ತದೆ. ಆದರೆ ಈ ಹೊಸ ಪದ್ಧತಿಯಲ್ಲಿ ಅಂಥದ್ದೇನೂ ಇಲ್ಲ ಎಂಬುದು ವಿಶೇಷವಾಗಿದೆ.
Advertisement