ನವದೆಹಲಿ: ಆಪ್ ನ ಎಲ್ಲಾ ಹುದ್ದೆಗಳಿಗೂ ವಕೀಲ ಹಾಗೂ ಹಿರಿಯ ನಾಯಕ ಎಚ್ ಎಸ್ ಫೂಲ್ಕಾ ರಾಜೀನಾಮೆ ನೀಡಿದ್ದಾರೆ.
1984 ರ ಸಿಖ್ ಗಲಭೆ ಸಂಬಂಧಿತ ಪ್ರಕರಣಗಳಲ್ಲಿ ಗಮನ ಹರಿಸಲು ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಸಿಖ್ ಗಲಭೆ ಪ್ರಕರಣ ಅಂತಿಮ ಹಂತ ತಲುಪಿದ್ದು, ತಾವು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ತಾವು ಪಕ್ಷದ ಒಂದು ಭಾಗವಾಗಿ ಯಾವಾಗಲೂ ಇರುವುದಾಗಿ ಫೂಲ್ಕಾ ಹೇಳಿದ್ದಾರೆ. ಆದರೆ ಪಕ್ಷದೊಳಗಿನ ಆಂತರಿಕ ಭಿನ್ನಮತದಿಂದ ಬೇಸರಗೊಂಡು ಫೂಲ್ಕ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ ಅವರು ಮುಂದಿನ ಪಂಜಾಬ್ ಲೋಕಸಭೆ ಚುನಾವಣೆಯಲ್ಲಿ ಆಪ್ ಜಯಗಳಿಸುವ ವಿಶ್ವಾಸ ವ್ಯಕ್ತ ಪಡಿಸಿದರು.ಆ ವೇಳೆ ಮತ್ತೆ ತಾವು ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳುವುದಾಗಿ ತಿಳಿಸಿದ್ದಾರೆ.
Advertisement