ನವದೆಹಲಿ: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಜನ್ಮ ದಿನಾಂಕ ಹಾಗೂ ಮಹಾಭಾರತ ಯುದ್ಧ ಪ್ರಾರಂಭದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಮಾಹಿತಿ ಹೊರ ಬಿದ್ದಿದೆ.
ರಾಮಾಯಣ ಹಾಗೂ ಮಹಾಭಾರತ, ಶ್ರೀರಾಮನಿಗೆ ಸಂಬಂಧಪಟ್ಟ ವಿಷಯಗಳು ಇತಿಹಾಸಕಾರರು, ವಿಜ್ಞಾನಿಗಳು, ವಿಶ್ಲೇಷಣಕಾರರ ನಡುವೆ ಜಿಜ್ಞಾಸೆ ಇನ್ನೂ ಮುಂದುವರಿದಿರುವ ನಡುವೆಯೇ, ಈ ಮಹತ್ವದ ಮಾಹಿತಿ ಹೊರಬಿದ್ದಿದ್ದು, ರಾಮಾಯಾಣ ಮತ್ತು ಮಹಾಭಾರತ ಕಾಲ್ಪನಿಕ ಕೃತಿಗಳಲ್ಲ. ಅವು ಐತಿಹಾಸಿಕ ದಾಖಲೆಗಳು ಎಂಬುದಕ್ಕೆ ದಾಖಲೆಗಳಿವೆ.
ಶ್ರೀರಾಮಚಂದ್ರ ಕ್ರಿಸ್ತ ಪೂರ್ವ 5114 ಜನವರಿ 10ರಂದು ಜನಿಸಿದ್ದಾನೆ. ಕ್ರಿಸ್ತ ಪೂರ್ವ 3139ರ ಅಕ್ಟೋಬರ್ 13ರಂದು ಮಹಾಭಾರತ ಯುದ್ಧ ಆರಂಭವಾಯಿತು. ಕ್ರಿಸ್ತ ಪೂರ್ವ 5076ರ ಸೆಪ್ಟೆಂಬರ್ 12ರಂದು ಅಶೋಕ ವನದಲ್ಲಿ ಹನುಮಂತ ಸೀತೆಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದ ಎಂಬ ಮಾಹಿತಿ ಜಗಜಾಹೀರಾಗಿದೆ.
ಮಹಾಭಾರತ, ರಾಮಾಯಣದ ದಿನಾಂಕವನ್ನು ಇಷ್ಟು ಕರಾರುವಕ್ಕಾಗಿ ಹೇಳುತ್ತಿದ್ದಾರಲ್ಲ ಎಂದು ಹುಬ್ಬೇರಿಸ್ಬೇಡಿ. ಹೌದು ದೇಶದ ಹಾಗೂ ವಿದೇಶಿ ಇತಿಹಾಸಕಾರರು ಖಚಿತವಾಗಿ ಹೇಳಲು ಅಸಾಧ್ಯ ಎಂದೇ ಹೇಳಿದ್ದ ವಿಷಯದ ಬಗ್ಗೆ ವೈಜ್ಞಾನಿಕ ಸಂಶೋಧನಾ ಸಂಸ್ಥೆಯೊಂದು ತಾನು ಸಾಧಿಸಿರುವುದಾಗಿ ಹೇಳಿಕೊಂಡಿದೆ.
ಈ ಸಂಸ್ಥೆ ಏರ್ಪಡಿಸಿದ್ದ ಋಗ್ವೇದದಿಂದ ರೋಬೋಟಿಕ್ಸ್ ವರೆಗೆ ಎಂಬ ಸಂಸ್ಕೃತಿಯ ವಿಶಿಷ್ಟ ಪ್ರದರ್ಶನದಲ್ಲಿ ತನ್ನ ಸಂಶೋಧನೆಯನ್ನು ಅನಾವರಣಗೊಳಿಸಿದೆ. ಅಷ್ಟೇ ಅಲ್ಲ ಈ ಸಂಶೋಧನಾ ಪ್ರದರ್ಶನದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಕಳೆದಿರುವ ಭಾರತದ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ನಮ್ಮ ಇಲಾಖೆ ಈ ಎಲ್ಲಾ ಮಾಹಿತಿ ಮತ್ತು ವರದಿಯನ್ನು ಕೋರಿರುವುದಾಗಿ ತಿಳಿಸಿದ್ದಾರೆ.
ಋಗ್ವೇದ, ರಾಮಾಯಣ ಮತ್ತು ಮಹಾಭಾರತಗಳ ಕುರಿತು ನಿಖರ ದಿನಾಂಕಗಳನ್ನು ಕಂಡು ಹಿಡಿಯಲು ಗ್ರಹಮಂಡಲದ ಮಾಹಿತಿಯನ್ನು ಆಧರಿಸಿರುವುದಾಗಿ ಸಂಸ್ಥೆಯ ನಿರ್ದೇಶಕ ಸರೋಜ್ ಬಾಲಾ ವಿವರಿಸಿದ್ದಾರೆ.
Advertisement