ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಸಂಸ್ಥೆ 500 ಕೋಟಿ ರೂ ವೆಚ್ಚದ ರಕ್ಷಣಾ ಸಾಧನ ತಯಾರಿಕಾ ಸಂಕೀರ್ಣವನ್ನು ಆಂಧ್ರಪ್ರದೇಶದ ಅನಂತಪುರದಲ್ಲಿ ನಿರ್ಮಿಸಲಿದೆ.
900 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ರಕ್ಷಣಾ ಸಾಧನ ತಯಾರಿಕಾ ಸಂಕೀರ್ಣವು ದೇಶದ ಅತಿ ದೊಡ್ಡ ಘಟಕವಾಗಿರಲಿದ್ದು, ರಕ್ಷಣಾ ವಲಯದಲ್ಲಿ ಬಿಇಎಲ್ ಗೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಕಲ್ಪಿಸಲಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಇಎಲ್ ಅಧ್ಯಕ್ಷ ಎಸ್.ಕೆ.ಶರ್ಮಾ, ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸುವುದಕ್ಕೆ ರಕ್ಷಣಾ ಸಾಧನಾ ತಯಾರಿಕಾ ಸಂಕೀರ್ಣ ಸಹಕಾರಿಯಾಗಲಿದ್ದು ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ರಾತ್ರಿ ವೀಕ್ಷಣಾ ತಂತ್ರಜ್ಞಾನ ಹಾಗೂ ಬಹುಕ್ರಿಯಾತ್ಮಕ ರೆಡಾರ್ ಗಳಿಗಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದ್ದೇವೆ. ನೆಟ್ವರ್ಕ್ ಕೇಂದ್ರಿತ ಸಂವಹನ ಮತ್ತು ವಿದ್ಯುನ್ಮಾನ ಯುದ್ಧ ವ್ಯವಸ್ಥೆಯುಳ್ಳ ಭೂಕಕ್ಷೆಯಿಂದ ಆಕಾಶಕ್ಕೆ ಜಿಗಿಯುವ (ಎಸ್ಎಎಂ) ಕ್ಷಿಪಣಿಗಳನ್ನು ರಕ್ಷಣಾ ಸಾಧನ ತಯಾರಿಕಾ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಎಸ್.ಕೆ.ಶರ್ಮಾ ಹೇಳಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.
Advertisement