ಆಂಧ್ರ ಪ್ರದೇಶ: ವಾಮಚಾರಕ್ಕಾಗಿ ಮಂತ್ರವಾದಿಯೊಬ್ಬ ಐದುವ ವರ್ಷದ ಮಗುವನ್ನು ಬಲಿ ನೀಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಓಂಗೊಲೆ ಎಂಬ ಗ್ರಾಮದಲ್ಲಿ ನಡೆದಿದೆ.
ವೊಲೆಟಿವಾರಿಪಾಲೆಂ ಮಂಡಲದ ಪೊಕುರು ಗ್ರಾಮದ ನಿವಾಸಿ ತಿರುಮಲ ರಾವ್(30) ಎಂಬ ಮಂತ್ರವಾದಿ ತಾನು ಮಾಡುತ್ತಿರುವ ವಾಮಚಾರಕ್ಕಾಗಿ ಮಾನವ ಬಲಿ ನೀಡಬೇಕು ಎಂಬ ಉದ್ದೇಶದಿಂದ ಐದು ವರ್ಷದ ಬಾಲಕನ ತಲೆ ಕಡಿದು ಹತ್ಯೆ ಮಾಡಿದ್ದಾನೆ.
ಮಂತ್ರವಾದಿಯ ಈ ನೀಚ ಕೃತ್ಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತನನ್ನು ಹಿಡಿದು ಚೆನ್ನಾಗಿ ತಳಿಸಿ, ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಮಂತ್ರವಾದಿಯು ಅಂಗನವಾಡಿಯಿಂದ ಬಾಲಕನನ್ನು ಕರೆದುಕೊಂಡು ತಾನು ಪೂಜೆಗೆ ಸಿದ್ಧಪಡಿಸಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪೂಜಾ ಕಾರ್ಯ ನಿರ್ವಹಿಸಿ ಬಾಲಕನ ತಲೆ ಕತ್ತರಿಸಿ, ಬಳಿಕ ರಕ್ತ ಸಂಗ್ರಹಿಸಿ ಅದನ್ನು ತನ್ನ ಮನೆಯೆಲ್ಲಾ ಸಿಂಪಡಿಸಿದ್ದಾನೆಂದು ಹೇಳಲಾಗಿದೆ.
ಮಗುವನ್ನು ಕರೆದುಕೊಂಡು ಬರಲು ತಾಯಿ ಅಂಗನವಾಡಿಗೆ ಹೋಗಿದ್ದಾಳೆ. ಆದರೆ, ಅಲ್ಲಿ ತನ್ನ ಮಗು ಇಲ್ಲದನ್ನು ಕಂಡು ಶಿಕ್ಷಕರಲ್ಲಿ ವಿಚಾರಿಸಿದಾಗ, ಶಿಕ್ಷಕರು ಮಗು ತಿರುಮಲ ರಾವ್ ಜೊತೆ ಹೋಗಿರುವುದನ್ನು ತಿಳಿಸಿದ್ದಾರೆ. ಆಗ ಮಹಿಳೆ ಮಂತ್ರವಾದಿ ಮನೆಗೆ ಹೋಗಿದ್ದಾಳೆ. ಆದರೆ ಮನೆ ಬಾಗಿಲು ಹಾಕಲಾಗಿತ್ತು.
ನಂತರ ತಾಯಿ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ಗ್ರಾಮಸ್ಥರು ಮನೆ ಬಾಗಿಲು ಮುರಿದು ನೋಡಿದಾಗ, ಬಾಲಕನ ಬಲಿ ನೀಡಿರುವುದು ಪತ್ತೆಯಾಗಿದೆ. ಆಕ್ರೋಶಗೊಂಡ ಗ್ರಾಮಸ್ಥರು ರಾವ್ ನನ್ನು ಹುಡುಕಿ ಎಳೆದುಕೊಂಡು ಹೋಗಿ, ಚೆನ್ನಾಗಿ ಥಳಿಸಿದ ನಂತರ ಸೀಮೆ ಎಣ್ಣೆ ಸುರಿದು ಬೆಂಕಿಯನ್ನೂ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆತನಿಗೆ ಒಂಗೋಲೆಯ ರಾಜೀವ್ ಗಾಂಧಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
Advertisement