ನಾಶಿಕ್: ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಮುಂಬೈ ಹೈಕೋರ್ಟ್ ತೀರ್ಪು ನಿನ್ನೆ ಹೊರಬಂದಿರುವ ಹಿನ್ನೆಲೆಯಲ್ಲಿ ಮಹಿಳಾಪರ ಹೋರಾಟಗಾರರು ಶನಿ ಶಿಂಗಣಾಪುರ ದೇವಾಲಯದತ್ತ ಹೊರಟಿದ್ದಾರೆ.
ಹೋರಾಟಗಾಕ್ತಿ ತೃಪ್ತಿ ದೇಸಾಯಿ ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಶನಿ ಶಿಂಗಣಾಪುರ ದೇವಸ್ಥಾನಕ್ಕೆ ಹೊರಟಿದ್ದು, ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕೋರ್ಟ್ ಈಗಾಗಲೇ ನಮ್ಮ ಪರವಾಗಿ ತೀರ್ಪು ನೀಡಿದೆ. ಇದು ನಮಗೆ ಸಿಕ್ಕಿದ ಗೆಲುವು ಎಂದು ಹೇಳಿದ್ದಾರೆ.
ಯಾರಾದರೂ ಇಂದು ನಮ್ಮನ್ನು ತಡೆಯಲು ಬಂದರೆ ಅವರ ವಿರುದ್ಧ ನಾವು ಎಫ್ ಐಆರ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಶನಿ ಶಿಂಗಣಾಪುರ ದೇವಾಲಯದ ಗರ್ಭ ಗುಡಿಯೊಳಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ, ಪಾದಯಾತ್ರೆ ನಡೆಸಿದ್ದರು. ಇದೀಗ ನ್ಯಾಯಾಲಯದ ತೀರ್ಪು ಮಹಿಳೆಯರ ಪರವಾಗಿ ಬಂದಿರುವುದರಿಂದ ಗರ್ಭಗುಡಿ ಪ್ರವೇಶಕ್ಕೆ ಇದ್ದ ತಡೆ ನಿವಾರಣೆಯಾದಂತಾಗಿದೆ.
Advertisement